ಭುವನೇಶ್ವರ: ಆಘಾತಕಾರಿ ಘಟನೆಯಲ್ಲಿ ಒಡಿಶಾ ಆರೋಗ್ಯ ಸಚಿವ ಮತ್ತು ಬಿಜೆಡಿ ನಾಯಕ ನಬಾ ದಾಸ್ ಅವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿದ್ದು, ಎದೆಗೆ ಗುರಿಯಿಸಿ ಶೂಟ್ ಮಾಡಲಾಗಿದೆ. ನಬಾ ದಾಸ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಭಾನುವಾರ ಜಾರ್ಸುಗುಡ ಜಿಲ್ಲೆಯ ಬ್ರಜರಾಜನಗರ ಬಳಿಯ ಗಾಂಧಿ ಚಕ್ ಬಳಿ ಈ ಘಟನೆ ನಡೆದಿದ್ದು, ನಬಾ ದಾಸ್ ಅವರು ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ ಗುಂಡಿನ ದಾಳಿ ಮಾಡಲಾಗಿದೆ.
ನಬಾ ದಾಸ್ ವಾಹನದಿಂದ ಇಳಿದ ನಂತರ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಂಡಿನ ದಾಳಿಯ ಹಿಂದಿನ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಘಟನೆಯ ನಂತರ, ನಬಾ ದಾಸ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಗುಂಡಿನ ದಾಳಿಯ ನಂತರ ಬಿಜೆಡಿ ಕಾರ್ಯಕರ್ತರು ಧರಣಿ ನಡೆಸಿದ್ದು, ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ.
ಸಚಿವರ ಮೇಲೆ ಅತ್ಯಂತ ಸಮೀಪದಿಂದ ಗುಂಡು ಹಾರಿಸಲಾಗಿದ್ದು, ಗುಂಡಿನ ದಾಳಿ ‘ಪೂರ್ವ ಯೋಜಿತ’ ಎಂದು ಶಂಕಿಸಲಾಗಿದೆ. ಮೆಗಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಬೇಕಿದ್ದ ನಬಾ ದಾಸ್ ಗೆ ಪೊಲೀಸ್ ಬೆಂಗಾವಲು ಸಹ ಒದಗಿಸಲಾಗಿತ್ತು. ಆದರೆ ಈ ಘಟನೆಯು ಭದ್ರತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.