ಬೆಂಗಳೂರು: ಉಗ್ರ ಚುಟವಟಿಕೆಗೆ ಹಣ ಕ್ರೋಡೀಕರಿಸಲು ಡಕಾಯಿತಿ, ದರೋಡೆ ಮಾಡಿದ್ದ ಪಶ್ಚಿಮ ಬಂಗಾಳ ನಾಲ್ವರು ಉಗ್ರರರಿಗೆ ನಗರದ ಎನ್ಐಎ ವಿಶೇಷ ಕೋರ್ಟ್ 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಎನ್ಐಎ ದಾಖಲಿಸಿದ್ದ ಪ್ರಕರಣವನ್ನು ವಿಚಾರಣೆ ನಡೆಸಿದ ಎನ್ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ. ಗಂಗಾಧರ, ನಾಲ್ವರು ಅಪರಾಧಿಗಳಿಗೆ ಜೈಲು ಶಿಕ್ಷೆ ಜೊತೆಗೆ ತಲಾ 40 ಸಾವಿರ ರೂ.
ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪಶ್ಚಿಮ ಬಂಗಾಳದ ಬೀರ್ಭೂಮ್ ಜಿಲ್ಲೆಯ ಕದೋರ್ ಖಾಜಿ ಅಲಿಯಾಸ್ ಮೋಟಾ ಅನಾಸ್ (33), ಮುಸ್ತಾಫಿಝುರ್ ರಹಮಾನ್ ಅಲಿಯಾಸ್ ತುಹಿನ್ (39), ಶಂಷೇರ್ ಗಂಜ್ ಜಿಲ್ಲೆಯ ಅದಿಲ್ ಶೇಖ್ (27) ಮತ್ತು ಮುರ್ಷಿದಾಬಾದ್ ಜಿಲ್ಲೆಯ ಅಬ್ದುಲ್ ಕರೀಮ್ ಅಲಿಯಾಸ್ ಚೋಟಾ (21) ಶಿಕ್ಷೆಗೆ ಒಳಗಾದ ಉಗ್ರರರು.
2018ರಲ್ಲಿ ನಗರದ ಕೆ.ಆರ್.ಪುರ, ಕೊತ್ತನೂರು ಮತ್ತು ಅತ್ತಿಬೆಲೆ ಠಾಣೆಯ ವ್ಯಾಪ್ತಿಯಲ್ಲಿ ಡಕಾಯತಿ ನಡೆಸಿ ಹಣ, ಬೆಲೆಬಾಳುವ ಎಲೆಕ್ಟ್ರಾನಿಕ್ ವಸ್ತುಗಳನ್ನು ದೋಚಿದ್ದರು. ಚಿಕ್ಕಬಾಣಾವರ ವ್ಯಾಪ್ತಿಯ ಮನೆಯಲ್ಲಿ ಬಾಡಿಗೆ ಪಡೆದು ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಎನ್ಐಎ ಅಧಿಕಾರಿಗಳು, ಮನೆ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಎಲೆಕ್ಟ್ರಾನಿಕ್ ವಸ್ತುಗಳು, ರಾಸಾಯನಿಕ ಉಪಕರಣಗಳು, ಬಾಂಬ್ ತಯಾರಿಸಲು ಬಳಸುವ ಕಂಟೈನರ್, ಸುಧಾರಿತ ಸ್ಫೋಟಕ ಸಾಧನ, ಡಿಜಿಟಲ್ ಕ್ಯಾಮರಾ ಮತ್ತು ಕೈಬರಹದ ದಾಖಲೆಗಳನ್ನು ಜಪ್ತಿ ಮಾಡಿದ್ದರು. 2019 ಮತ್ತು 2020ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರ ಮೇರೆಗೆ ಎನ್ಐಎ ಪರ ವಕೀಲ ಪಿ.ಪ್ರಸನ್ನಕುಮಾರ್, ಮಂಡಿಸಿದ್ದರು. ಪ್ರಾಸಿಕ್ಯೂಷನ್ ವಾದ ಪುರಸ್ಕರಿಸಿರುವ ನ್ಯಾಯಾಧೀಶರು, ಅಪರಾಧಿಗಳಿಗೆ ಭಾರತೀಯ ದಂಡ ಸಂಹಿತೆ 1860 ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ1967 ಹಾಗೂ ಶಸ್ತ್ರಾಸ್ತ್ರ ಕಾಯ್ದೆ 1959ರ ವಿವಿಧ ಕಲಂಗಳ ಅನುಸಾರ ಅಪರಾಧ ಎಸಗಿರುವುದು ಸಾಬೀತಾಗಿದೆ.
ಬೆಂಗಳೂರಿನಲ್ಲಿ ವಾಸವಿದ್ದ ಮನೆಗಳಲ್ಲಿ ಸ್ಫೋಟಕಗಳನ್ನು ತಯಾರಿಸಲು ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಮತ್ತು ಮುಸ್ತಾಫಿಝುರ್ ರೆಹಮಾನ್ ಸಹಚರರೊಂದಿಗೆ ಸೇರಿ ಸ್ಫೋಟಕಗಳನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ದೃಢಪಟ್ಟಿದೆ ಎಂದು ಶಿಕ್ಷೆ ಪ್ರಕಟಿಸಿದರು.
Laxmi News 24×7