ಬೈಲಹೊಂಗಲ: ಪ್ರತಿವರ್ಷದಂತೆ ಜ.12 ಹಾಗೂ 13 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಸೋಮವಾರ ತಾಲೂಕಿನ ಸಂಗೊಳ್ಳಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮಾರಕ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕೋವಿಡ್ ಕಾರಣಕ್ಕೆ ಎರಡು ವರ್ಷಗಳಿಂದ ಸರಳ ರೀತಿಯಲ್ಲಿ ಆಚರಿಸಲಾಗಿದೆ.
ಆದರೆ ಈ ಬಾರಿ ಗ್ರಾಮಸ್ಥರ ಒಕ್ಕೊರಲಿನ ಒತ್ತಾಯದಂತೆ ಉತ್ಸವವನ್ನು ಸಡಗರದಿಂದ ಆಚರಿಸಲಾಗುವುದು.
ಉತ್ಸವಕ್ಕಾಗಿ ಒಂದು ಕೋಟಿ ರೂ. ಅನುದಾನ ಒದಗಿಸುವಂತೆ ಪ್ರಸ್ತಾವನೆ ಈಗಾಗಲೇ ಕಳಿಸಲಾಗಿದೆ. ಆದರೆ ಸರಕಾರದಿಂದ ಇನ್ನೂ ಯಾವುದೇ ಹಣಕಾಸು ಬಿಡುಗಡೆಯಾಗಿಲ್ಲ. ಒಂದು ಕೋಟಿ ರೂಪಾಯಿ ಬಿಡುಗಡೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಐವತ್ತು ಲಕ್ಷ ರೂಪಾಯಿ ಬಿಡುಗಡೆಗೆ ಮುಖ್ಯಮಂತ್ರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಒಂದು ವಾರದಲ್ಲಿ ಅನುದಾನ ಬಿಡುಗಡೆಯಾಗಲಿದೆ ಎಂದು ಶಾಸಕ ಕೌಜಲಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮದ ಜನರು ಪೂರ್ವಭಾವಿ ಸಭೆಯಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಯಾವುದೇ ಕಾರ್ಯಕ್ರಮ ಅಥವಾ ಉತ್ಸವ ಬರೀ ಸರಕಾರಿ ಉತ್ಸವ ಆಗಬಾರದು. ಸಂಗೊಳ್ಳಿ ಉತ್ಸವ ಬರೀ ಸಂಗೊಳ್ಳಿಗೆ ಸೀಮಿತವಾಗಬಾರದು. ಇಡೀ ಜಿಲ್ಲೆ ಹಾಗೂ ರಾಜ್ಯದಾದ್ಯಂತ ಪಸರಿಸಬೇಕು ಎಂದರು.
ಪ್ರತಿವರ್ಷ ಜ. 12 ಹಾಗೂ 13 ರಂದು ಉತ್ಸವ ಆಚರಿಸಲಾಗುತ್ತಿದ್ದು, ಈ ಬಾರಿ ಜನವರಿ ಅಂತ್ಯದಲ್ಲಿ ಆಚರಿಸುವ ಬಗ್ಗೆ ಆರಂಭದಲ್ಲಿ ಇಂಗಿತ ವ್ಯಕ್ತಪಡಿಸಿದರು. ಈ ಬಗ್ಗೆ ಗ್ರಾಮಸ್ಥರು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬಹುದು ಎಂದರು. ಆದರೆ ನಂತರ ಗ್ರಾಮಸ್ಥರ ಆಶಯದಂತೆ ಜ.12 ಹಾಗೂ 13 ರಂದು ಉತ್ಸವ ನಡೆಸುವುದಾಗಿ ಪ್ರಕಟಿಸಿದರು.
ಮುಂದಿನ ವರ್ಷದಿಂದ ಜ್ಯೋತಿಯಾತ್ರೆ ರಾಜ್ಯದಾದ್ಯಂತ ಸಂಚರಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದು ಶಾಸಕ ಮಹಾಂತೇಶ ಕೌಜಲಗಿ ತಿಳಿಸಿದರು. ಈ ಬಾರಿ ಕುಸ್ತಿ ಸ್ಪರ್ಧೆಗಳನ್ನು ಕೂಡ ಆಯೋಜಿಸಲಾಗುವುದು. ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ರಚಿಸಲಾಗಿರುವ ಎಲ್ಲ ಸಮಿತಿಗಳು ತಮಗೆ ವಹಿಸಲಾಗಿರುವ ಕೆಲಸಗಳನ್ನು ಆರಂಭಿಸಬೇಕು ಎಂದು ಸೂಚನೆ ನೀಡಿದರು.
ಉತ್ಸವಕ್ಕೆ ಅನುದಾನ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ನಾಲ್ಕೈದು ತಿಂಗಳಿನಿಂದ ಪ್ರಯತ್ನ ನಡೆಸಲಾಗುತ್ತಿದೆ. ಈಗ ಮತ್ತೂಮ್ಮೆ ಪ್ರಯತ್ನಿಸಿ ಶೀಘ್ರ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದರು. ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ ಮಾತನಾಡಿ, ಉತ್ಸವ ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಗ್ರಾಮಸ್ಥರನ್ನು ಒಳಗೊಂಡ 13 ವಿವಿಧ ಉಪ ಸಮಿತಿ ರಚಿಸಲಾಗುವುದು ಎಂದರು. ಸ್ವಾಗತ, ವಸತಿ, ಸಾಂಸ್ಕೃತಿಕ, ಪ್ರಚಾರ, ವೇದಿಕೆ, ವಿಚಾರ ಸಂಕಿರಣ, ವಸ್ತು ಪ್ರದರ್ಶನ ಮತ್ತಿತರ ಉಪ ಸಮಿತಿಗಳು ಕೆಲಸ ಮಾಡಲಿವೆ ಎಂದರು.