ಕೇಂದ್ರ ಸರ್ಕಾರವು ಐನ್ನೂರು ರೂಪಾಯಿ ಹಾಗೂ ಒಂದು ಸಾವಿರ ರೂಪಾಯಿಯ ನೋಟುಗಳನ್ನು ದೇಶದಲ್ಲಿ ಅಮಾನ್ಯೀಕರಣ ಮಾಡಿ ನಿನ್ನೆಗೆ 6 ವರ್ಷಗಳು ಆಗಿದೆ. 2016 ರ ನವೆಂಬರ್ 8 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 500 ರೂಪಾಯಿ ಹಾಗೂ 1,000 ರೂಪಾಯಿಯ ನೋಟುಗಳನ್ನು ದೇಶದಲ್ಲಿ ಇನ್ನು ಮುಂದೆ ಬರೀ ಪೇಪರ್ ಹಾಳೆ ಎಂದು ಘೋಷಣೆ ಮಾಡಿದ್ದಾರೆ.
ಈ ನೋಟು ಅಪನಗದೀಕರಣ ನಡೆದು ಆರು ವರ್ಷಗಳು ಆಗಿದೆ. ಆದರೆ ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್ಗಳು ಕೊನೆಯಾಗಿಲ್ಲ. ಅದರಲ್ಲೂ ಮುಖ್ಯವಾಗಿ, ಮಾಧ್ಯಮದ ಪ್ರಶ್ನೆಗೆ ಬಾಯಿಗೆ ಬಂದಂತೆ ಬೈದು ತನ್ನ ಸಿಟ್ಟನ್ನು ತೋರಿಸಿದ್ದ ವ್ಯಕ್ತಿಯಂತು ಪ್ರತಿ ವರ್ಷ ಟ್ರೋಲ್ಗೆ ಒಳಪಡುತ್ತಿದ್ದಾನೆ.
ಕೇಂದ್ರ ಸರ್ಕಾರವು ಪ್ರಮುಖವಾಗಿ, ಕಪ್ಪು ಹಣವನ್ನು ತಡೆಗಟ್ಟಲು, ನಕಲಿ ನೋಟುಗಳ ಚಲಾವಣೆ ತಪ್ಪಿಸಲು ಹಾಗೂ ಡಿಜಿಟಲೀಕರಣಕ್ಕೆ ಒತ್ತು ನೀಡುವ ಉದ್ದೇಶದಿಂದ ಈ ನೋಟು ಅಪನಗದೀಕರಣ ಮಾಡಲಾಗಿದೆ ಎಂದು ಹೇಳಿಕೊಂಡಿದೆ. ಇದರಿಂದಾಗಿ ಉಂಟಾದ ಆರ್ಥಿಕ ಪ್ರಭಾವದ ಬಗ್ಗೆ ಒಂದೆಡೆ ಟ್ವಿಟ್ಟರ್ನಂತಹ ಸಾಮಾಜಿಕ ಮಾಧ್ಯಮದಲ್ಲಿ ಗಂಭೀರವಾದ ಚರ್ಚೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ನೆಟ್ಟಿಗರು ಟ್ರೋಲ್, ಮೀಮ್ಸ್ ಅನ್ನು ಹಂಚಿಕೊಂಡು ಅಪಹಾಸ್ಯ ಮಾಡುತ್ತಿದ್ದಾರೆ. ಹಾಗಾದರೆ ಈ ದಿನ ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದು ಹೇಗೆ, ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ…
ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದು ಹೇಗೆ?
ಕೆಲವು ಜನರು ನೋಟಿನ ಅಪನಗದೀಕರಣ ದೇಶದಲ್ಲಿ ಸರ್ಕಾರ ತೆಗೆದುಕೊಂಡ ಉತ್ತಮ ನಿರ್ಧಾರ ಎಂದು ಹೇಳಿದರೆ, ಇನ್ನು ಕೆಲವರು ನೋಟು ಅಪನಗದೀಕರಣ ಭಾರತದ ಇತಿಹಾಸದಲ್ಲೇ ಸರ್ಕಾರದ ಅತೀ ಕೆಟ್ಟ ನಿರ್ಧಾರ ಎಂದಿದ್ದಾರೆ. ಇನ್ನು ಕೆಲವು ಹಳೆಯ ವಿಡಿಯೋ, ಫೋಟೋಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪ್ರಮುಖವಾಗಿ ಕೆಲವು ಜನರು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ಸರ್ಕಾರದ ಒಂದು ನಿರ್ಧಾರದಿಂದಾಗಿ ಜನರ ಜೀವನ ದುಸ್ಥಿತಿಗೆ ತಲುಪಿತು. ಬಡ ಜನರ ಬೀದಿಗೆ ಬೀಳುವಂತೆ ಆಯಿತು ಎಂದು ಹೇಳಿಕೊಂಡಿದ್ದಾರೆ. ಆದರೆ ಇನ್ನು ಕೆಲವರು ಅಪನಗದೀಕರಣದಿಂದಾಗಿ ಡಿಜಿಟಲ್ ವಹಿವಾಟು ಹೆಚ್ಚಾಗಿದೆ ಎಂದಿದ್ದಾರೆ.
ಇನ್ನು ನೋಟಿನಲ್ಲಿ ಚಿಪ್ ಇದೆ ಎಂದು ಮಾಡಲಾದ ಸುದ್ದಿಯನ್ನು ಕೂಡಾ ಟ್ರೋಲ್ ಮಾಡಲಾಗುತ್ತಿದೆ. ಕೆಲವರು ಬ್ಯಾಂಕ್ನ ಹೊರಗೆ ಜನರು ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ನಿಮಗೆ ಈಗಲೂ ನೆನಪಿನಲ್ಲಿ ಇರಬಹುದು ಎಂದು ಹೇಳಿದ್ದಾರೆ.