Breaking News
Home / ಜಿಲ್ಲೆ / ಬೆಳಗಾವಿ / ಕಿತ್ತೂರು / ವೀರರಾಣಿ ಚನ್ನಮ್ಮ ಕಿತ್ತೂರು ಉತ್ಸವ-2022ಕ್ಕೆ ವಿದ್ಯುಕ್ತ ಚಾಲನೆ

ವೀರರಾಣಿ ಚನ್ನಮ್ಮ ಕಿತ್ತೂರು ಉತ್ಸವ-2022ಕ್ಕೆ ವಿದ್ಯುಕ್ತ ಚಾಲನೆ

Spread the love

ವೀರರಾಣಿ ಚನ್ನಮ್ಮ ಕಿತ್ತೂರು ಉತ್ಸವ-2022ಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದ್ದು, ವೀರಜ್ಯೋತಿಯ ಸ್ವಾಗತ, ಆನೆಯ ಮೇಲೆ ವೀರಮಾತೆ ಚನ್ನಮ್ಮಾಜಿಯ ಭವ್ಯ ಮರವಣಿಗೆಗೆ ಕಿತ್ತೂರು ಕಲ್ಮಠದ ರಾಜಯೋಗಿಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. ಈ ಅದ್ಭುತ ಕ್ಷಣಕ್ಕೆ ಹಲವು ಗಣ್ಯರು, ಸಾವಿರಾರು ಅಭಿಮಾನಿಗಳು ಸಾಕ್ಷಿಯಾದರು.

ಹೌದು ಬೆಂಗಳೂರಿನಿಂದ ಆರಂಭವಾಗಿ ಇಡೀ ರಾಜ್ಯ ಸಂಚರಿಸಿ ಬೈಲಹೊಂಗಲದ ಚನ್ನಮ್ಮಾಜಿ ಸಮಾಧಿಯಿಂದ ಆಗಮಿಸಿದ ವೀರಜ್ಯೋತಿಯನ್ನು ಕಿತ್ತೂರು ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ಸ್ವಾಗತಿಸಲಾಯಿತು. ಈ ವೇಳೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಮಹಾಂತೇಶ ದೊಡ್ಡಗೌಡರ, ಮಹಾಂತೇಶ ಕೌಜಲಗಿ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ್ ಪಾಟೀಲ್, ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಜಿ.ಪಂ.ಸಿಇಓ ದರ್ಶನ್, ಎಸ್‍ಪಿ ಡಾ.ಸಂಜೀವ್ ಪಾಟೀಲ್, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ ಸೇರಿದಂತೆ ಇನ್ನಿತರ ಗಣ್ಯರು ಚೆನ್ನಮ್ಮಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಉತ್ಸವದ ಧ್ವಜಾರೋಹಣ ನೆರವೇರಿಸಿ ಜ್ಯೋತಿಯನ್ನು ಬರಮಾಡಿಕೊಳ್ಳಲಾಯಿತು. ಜ್ಯೋತಿ ಸ್ವಾಗತದ ಬಳಿಕ ಚೆನ್ನಮ್ನ ಕಿತ್ತೂರಿನ ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಅವರು ಜಾನಪದ ಕಲಾವಾಹಿನಿಗೆ ಚಾಲನೆ ನೀಡಿದರು. ನವಿಲು ನೃತ್ಯ, ಕೇರಳ ತೆಯಮ್ ನೃತ್ಯ, ಚಂಡಮದ್ದಳೆ, ಪೂಜಾ ಕುಣಿತ, ನಂದಿಧ್ವಜ, ಪಟಾಕುಣಿತ, ಚಿಟ್ಟೆಮೇಳ, ಗೊಂಬೆ ಕುಣಿತ, ಝಾಂಜ್ ಪಥಕ ಸೇರಿದಂತೆ ವಿವಿಧ ಕಲಾತಂಡಗಳ ನೂರಾರು ಕಲಾವಿದರು ಕಲಾವಾಹಿನಿಯಲ್ಲಿ ಪಾಲ್ಗೊಂಡಿದ್ದರು.

ಜನಪದ ಗೀತೆಗಳನ್ನು ಹಾಡುತ್ತಾ ಸಾಗಿದ ತಂಡವು ಚೆನ್ನಮ್ಮನ ಶೌರ್ಯ, ಸಾಹಸದ ಗುಣಗಾನ ಮಾಡುವ ಮೂಲಕ ಕಿತ್ತೂರಿನ ಗತವೈಭವವನ್ನು ಮೆಲುಕು ಹಾಕಿತು. ಇದೇ ಮೊದಲ ಬಾರಿಗೆ ಅನೆಯ ಮೇಲೆ ಚನ್ನಮ್ಮಾಜಿಯ ಭವ್ಯ ಮೆರವಣಿಗೆಯು ಕಿತ್ತೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಎಲ್ಲರ ಮನಸೂರೆಗೊಳಿಸಿತು. ಇದರೊಂದಿಗೆ ವಿವಿಧ ಇಲಾಖೆಯ ಕಾರ್ಯಗಳು ಹಾಗೂ ಯೋಜನೆಗಳ ಅರಿವು ಮೂಡಿಸುವ ಸ್ತಬ್ಧಚಿತ್ರಗಳು ಕೂಡ ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಕಲಾವಾಹಿನಿಯ ಮೆರುಗು ಹೆಚ್ಚಿಸಿದರು.

ರಸ್ತೆಯ ಇಕ್ಕೆಗಲಗಳಲ್ಲಿ ನೆರೆದಿದ್ದ ಸಾವಿರಾರು ಜನರು ವಿವಿಧ ಕಲಾತಂಡಗಳ ಪ್ರದರ್ಶನವನ್ನು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಕಿತ್ತೂರು ಮಹಾದ್ವಾರದ ಬಳಿ ಇರುವ ಶೂರ ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರ ಬಾಳಪ್ಪ ಅವರ ಪ್ರತಿಮೆಗಳಿಗೂ ಗಣ್ಯರು ಮಾಲಾರ್ಪಣೆ ಮಾಡಿದರು. ಉತ್ಸವದ ಅಂಗವಾಗಿ ಕಿತ್ತೂರಿನ ಗಡಾದಮರಡಿಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರು ಧ್ವಜಾರೋಹಣ ನೆರವೇರಿಸಿದರು.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ