ಇಂದು ಬೆಳಗಿನ ಜಾವ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದ ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಶಾಸಕರು ಹಾಗೂ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ಮೃತದೇಹ ಸ್ವಕ್ಷೇತ್ರ ಸವದತ್ತಿಗೆ ತರಲಾಗಿದೆ.
ತಮ್ಮ ನೆಚ್ಚಿನ ನಾಯಕನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಸವದತ್ತಿ ಕ್ಷೇತ್ರ ಶೋಕ ಸಾಗರದಲ್ಲಿ ಮುಳುಗಿದೆ. ಅಭಿಮಾನಿಗಳ ದಂಡು ಆನಂದ ಮಾಮನಿ ಅವರ ನಿವಾಸಕ್ಕೆ ತಂಡೋಪತಂಡವಾಗಿ ದೌಡಾಯಿಸಿದ್ದು ಕಣ್ಣೀರು ಹಾಕುತ್ತಿದ್ದಾರೆ.
ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಸವದತ್ತಿಗೆ ಆಗಮಿಸುತ್ತಿದ್ದು ಸಂಜೆ ಮಾಮನಿ ಅವರ ಫಾರ್ಮ ಹೌಸ್ ನಲ್ಲಿ ಆನಂದ ಮಾಮನಿ ಅವರ ಅಂತ್ಯಕ್ರಿಯೆ ನೆರವೇರಲಿದೆ. ಹಲವು ಸಚಿವರು, ಶಾಸಕರು, ಮಠಾಧೀಶರು, ಸಾವಿರಾರು ಅಭಿಮಾನಿಗಳು ಭಾಗಿಯಾಗಲಿದ್ದಾರೆ.