ಹುಬ್ಬಳ್ಳಿ: ದೇಶಾದ್ಯಂತ ಪೇ ಸಿಎಂ ಪೋಸ್ಟರ್ಗಳು ಸಾಕಷ್ಟು ಸುದ್ದಿ ಮಾಡಿದ್ದವು. ಅದೇ ಮಾದರಿಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಈಗ ಪೇ ಮೇಯರ್ ಪೋಸ್ಟರ್ ಅಭಿಯಾನ ಜೋರಾಗಿದೆ.
ಪೇ ಸಿಎಂ ಚರ್ಚೆ ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ ಪೇ ಮೇಯರ್ ಅಭಿಯಾನದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಆದರೆ ಈಗ ಅಭಿಯಾನ ಪೋಸ್ಟರ್ ರೂಪ ಪಡೆದುಕೊಂಡಿದ್ದು, ನಗರದ ಪ್ರಮುಖ ಬೀದಿಗಳು ಹಾಗೂ ಗೋಡೆಗಳ ಮೇಲೆ ಪೋಸ್ಟರ್ ಹಚ್ಚುವ ಮೂಲಕ ಅಭಿಯಾನ ನಡೆಸುತ್ತಿದ್ದಾರೆ.
ರಾಷ್ಟ್ರಪತಿಗಳ ಪೌರ ಸನ್ಮಾನ ಕಾರ್ಯಕ್ರಮದ ಹೆಸರಲ್ಲಿ ಸುಮಾರು 1.5 ಕೋಟಿ ದುಂದು ವೆಚ್ಚ ಮಾಡಿದ್ದಕ್ಕೆ ಪೇ ಮೇಯರ್ ಅಭಿಯಾನ ಆರಂಭಿಸಿರುವ ಕಾಂಗ್ರೆಸ್ ನಾಯಕ ರಜತ್ ಉಳ್ಳಾಗಡ್ಡಿಮಠ ಅವರು, ಮೇಯರ್ ವಿರುದ್ದ ವಾಗ್ದಾಳಿ ನಡೆಸಿದರು. ನಗರ ರಸ್ತೆ ದುರಸ್ತಿಗೆ ಹಣವಿಲ್ಲ ಎನ್ನುವ ಮೇಯರ್ ಈರೇಶ ಅಂಚಟಗೇರಿ ಅವರು ಪೌರ ಸನ್ಮಾನ ಹೆಸರಿನಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ. ಪೆಂಡಾಲ್ ಹಾಕಿದ ನಂತರ ಕೊಟೇಶನ್ ಕೇಳಿ ಹುಬ್ಬಳ್ಳಿಯ ಮಾನ ಕಳೆದ ಮೇಯರ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.