ಧಾರವಾಡ : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಮೀನುಗಾರರಿಗೆ ನೀಡಲಾಗುತ್ತಿರುವ ಡೀಸೆಲ್ ಸಬ್ಸಿಡಿ ಮಾದರಿಯಲ್ಲಿ ರೈತರಿಗೂ ರೈತ ಶಕ್ತಿ ಯೋಜನೆ ಮೂಲಕ ಡೀಸೆಲ್ ರಿಯಾಯ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ರೈತ ಶಕ್ತಿ ಯೋಜನೆ ಜಾರಿಗೊಳಿಸಿದೆ. ಸಾಮಾನ್ಯವಾಗಿ ರೈತರು ಬಿತ್ತನೆ ಸೇರಿ ಕೃಷಿ ಚಟುವಟಿಕೆಗಳಿಗೆ ಪ್ರತಿ ಎಕರೆಗೆ 25 ಲೀಟರ್ ಡೀಸೆಲ್ ಖರ್ಚು ಮಾಡುತ್ತಾರೆ. ಎಕರೆಗೆ 20 ಲೀಟರ್ ಗೆ ತಲಾ 25 ರೂ.ರಂತೆ ರಿಯಾಯ್ತಿಗೆ ಆಗ್ರಹಿಸಿದ್ದೆ, ಆದರೆ ಸಿಎಂ ಬೊಮ್ಮಾಯಿ ಎಕರೆಗೆ 10 ಲೀಟರ್ ಗೆ 25 ರೂ.ನಂತೆ ಐದು ಎಕೆರೆಗೆ 1,250 ರೂ. ರಿಯಾಯ್ತಿ ನೀಡಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.