ಸಾಂಗ್ಲಿ: ಹಳ್ಳಿ ಕಡೆಗಳಲ್ಲಿಎತ್ತು ಯಾವಾಗಲೂ ಬಿಡುವಿಲ್ಲದ ಪ್ರಾಣಿ. ಕೃಷಿಯ ಜೊತೆಗೆ ಬಂಡಿಗಳನ್ನು ಎಳೆಯಲು ಎತ್ತನ್ನು ನಿರಂತರವಾಗಿ ಬಳಸಲಾಗುತ್ತದೆ. ಹೆಚ್ಚಿನ ಸಂದರ್ಭದಲ್ಲಿಎತ್ತಿನ ಗಾಡಿಗೆ ಅದರ ಸಾಮರ್ಥ್ಯ ಮೀರಿ ಹೊರೆ ಹಾಕಲಾಗುತ್ತದೆ. ಇದರ ನೇರ ಪರಿಣಾಮ ಎತ್ತಿನ ಕುತ್ತಿಗೆಯ ಮೇಲಾಗುತ್ತದೆ.
ಇದರ ವಿರುದ್ಧ ಪ್ರಾಣಿ ಪ್ರಿಯರು ಆಗಾಗ್ಗೆ ಧ್ವನಿ ಎತ್ತಿದ್ದಾರೆ. ಆದರೆ, ಎತ್ತಿನ ಕತ್ತಿನ ಹೊರೆ ಮಾತ್ರ ಕಡಿಮೆಯಾಗಿಲ್ಲ. ಆದರೆ ಇದೀಗ ಎತ್ತಿನ ಭಾರ ಕಡಿಮೆ ಮಾಡುವ ಹೊಸ ಸಂಶೋಧನೆಯೊಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. ಇಸ್ಲಾಂಪುರದ ರಾಜಾರಾಂಬಾಪು ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ‘ಸಾರಥಿ’ ಎಂಬ ವಿಶೇಷ ಎತ್ತಿನ ಗಾಡಿ ನಿರ್ಮಿಸಿದ್ದಾರೆ. ಈ ಎತ್ತಿನ ಗಾಡಿಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಯಾರಿಸಿದ ರೋಲಿಂಗ್ ಸಪೋರ್ಟ್ ನೀಡಲಾಗಿದ್ದು, ಇದು ಎತ್ತುಗಳ ಕುತ್ತಿಗೆಯ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ.
ಕಬ್ಬು ಅರೆಯುವ ಸಮಯದಲ್ಲಿ ರೈತರು ಸಾಮಾನ್ಯವಾಗಿ ಎತ್ತಿನ ಗಾಡಿಯಲ್ಲಿ ಕಬ್ಬು ತುಂಬಿಸಿ ಗಾಣದ ಕಡೆ ಹೊರಡುವ ದೃಶ್ಯ ಸಾಮಾನ್ಯವಾಗಿರುತ್ತದೆ. ಆದರೆ ಬಹಳಷ್ಟು ಬಾರಿ ಎತ್ತು ಹೊರಬಹುದಾದ ಭಾರಕ್ಕಿಂತ ಹೆಚ್ಚಿನ ಭಾರವನ್ನೇ ಹಾಕಲಾಗಿರುತ್ತದೆ. ನೂರಾರು ಕಿಲೋ ಕಬ್ಬು ಸಾಗಿಸುವಾಗ ಎತ್ತಿನ ಗಾಡಿ ಪಲ್ಟಿ ಹೊಡೆದು ಎತ್ತುಗಳು ಗಂಭೀರವಾಗಿ ಗಾಯಗೊಂಡ ಘಟನೆಗಳೂ ನಡೆದಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಸ್ಲಾಂಪುರದ ರಾಜಾರಾಂಬಾಪು ಪಾಟೀಲ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಸಾಹಸ ಬಹುತೇಕ ಯಶಸ್ವಿಯಾಗಿದೆ.