ಬೆಂಗಳೂರು : ಮೇ.12ರಂದು ಬಿಜೆಪಿ ಮುಖಂಡ ಬಿ.ಪಿ.ಅನಂತರಾಜು ಆತ್ಮಹತ್ಯೆ ಪ್ರಕರಣ ಸಂಬಂಧ ಮೃತನ ಪತ್ನಿ ಬಿ.ಕೆ.ಸುಮಾ ಅವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಹಿನ್ನೆಲೆಯಲ್ಲಿ ಮಧ್ಯಾಹ್ನ ಇನ್ಸ್ಪೆಕ್ಟರ್ ರವಿಕುಮಾರ್ ಮುಂದೆ ಹಾಜರಾದ ಸುಮಾ ಅವರನ್ನು ನಾಲ್ಕು ತಾಸು ಸುದೀರ್ಘವಾಗಿ ಪ್ರಶ್ನಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಆದರೆ ತನ್ನ ಮೇಲಿನ ಆರೋಪಗಳನ್ನು ಸುಮಾ ನಿರಾಕರಿಸಿದ್ದಾರೆ.
ಇತ್ತೀಚಿಗೆ ವೈಯಕ್ತಿಕ ಕಾರಣಕ್ಕೆ ಅನಂತರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ತಮ್ಮ ಪತಿಗೆ ಸಾವಿಗೆ ಹನಿಟ್ರ್ಯಾಪ್ ಕಾರಣ ಎಂದೂ ಆರೋಪಿಸಿ ಸುಮಾ ನೀಡಿದ ದೂರಿನ ಮೇರೆಗೆ ಅನಂತರಾಜು ಅವರ ಗೆಳತಿ ರೇಖಾಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಈ ಬಂಧನ ಬಳಿಕ ಪ್ರಕರಣಕ್ಕೆ ಅನಿರೀಕ್ಷಿತ ತಿರುವು ಸಿಕ್ಕಿದ್ದು, ಅನಂತರಾಜು ಕೌಟುಂಬಿಕ ಕಲಹದ ಆಡಿಯೋಗಳು ಬಯಲಾಗಿ ವೈರಲ್ ಆಗಿದ್ದವು. ಈ ಆಡಿಯೋಗಳಲ್ಲಿ ಪತಿಗೆ ಸುಮಾ ಜೀವ ಬೆದರಿಕೆ ಹಾಕುವ ಮಾತು ಉಲ್ಲೇಖವಾಗಿತ್ತು.
ಆಡಿಯೋದಲ್ಲಿನ ಸಂಭಾಷಣೆಯನ್ನೇ ಮುಂದಿಟ್ಟು ವಿಚಾರಣೆ ನಡೆಸಿದ ಪೊಲೀಸರು, ತಮ್ಮ ದಾಂಪತ್ಯ ಜೀವನದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅನಂತರಾಜ್ ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ಅಂತಿಮ ವರದಿ ಬಂದ ಮೇಲೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Laxmi News 24×7