ಮಡಿಕೇರಿ: ಎಂಟಿಬಿ ಅವರಿಗೆ ಅವರು ಮಾಡಿದ ತಪ್ಪು ಇದೀಗ ಗೊತ್ತಾಗಿದೆ. ಈಗ ಅವರಿಗೆ ಪಶ್ಚಾತ್ತಾಪ ಆಗಿದೆ ಎಂದು ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ್ ಹೇಳಿದರು.
ಮಡಿಕೇರಿಯ ನಗರ ಸಮೀಪದ ಕರ್ಣಗೇರಿ ಗ್ರಾಮದಲ್ಲಿ ಇರುವ ರಾಜರಾಜೇಶ್ವರಿ ದೇಗುಲಕ್ಕೆ ಪರಮೇಶ್ವರ್ ದಂಪತಿ ಭೇಟಿ ನೀಡಿ ವಾರ್ಷಿಕ ಜಾತ್ರೋತ್ಸವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಬಿಜೆಪಿಗೆ ಸೇರಿ ತಪ್ಪು ಮಾಡಿದೆವು ಎಂದು ಸಚಿವ ಎಂಟಿಬಿ ನಾಗರಾಜ್ ಬಹಿರಂಗ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಅನೇಕ ಬಾರಿ ಅವರ ಮನೆಗೆ ಹೋಗಿ ಮನವೊಲಿಸಲು ಪ್ರಯತ್ನಿಸಿದ್ದೆವು. ಎಂಟಿಬಿ ಅವರ ಮನೆಗೆ ಡಿಕೆಶಿ ಮತ್ತು ನಾನು ಹೋಗಿದ್ದೆವು. ಆದರೆ ಅಂದು ಮಾತು ಕೇಳಲಿಲ್ಲ. ಅವರು ಏನೇನೋ ನಿರೀಕ್ಷೆಗಳನ್ನು ಇಟ್ಟುಕೊಂಡು ಹೋಗಿರುತ್ತಾರೆ. ಆದರೆ ಪಾಪ ನಿರೀಕ್ಷೆಗಳು ಸುಳ್ಳಾಗಿರುತ್ತವೆ ಎಂದು ವ್ಯಂಗ್ಯವಾಡಿದರು.
ಇದೀಗ ಎಂಟಿಬಿಗೆ ಪಶ್ಚಾತ್ತಾಪವೂ ಆಗಿರುತ್ತದೆ. ಹೀಗಾಗಿ ಆ ರೀತಿ ಬಹಿರಂಗವಾಗಿ ಮಾತನಾಡಿರುತ್ತಾರೆ. ಅವರು ಪಕ್ಷಕ್ಕೆ ಬರುವುದಾದರೆ ಸೇರಿಸಿಕೊಳ್ಳುವ ವಿಚಾರ ಅದನ್ನು ಹೈಕಮಾಂಡ್ ಚರ್ಚಿಸಿ ನಿರ್ಧಾರ ಮಾಡುತ್ತದೆ. ಆದರೆ ಈಗಾಗಲೇ ಸಿದ್ದರಾಮಯ್ಯ ಸೇರಿಸಿಕೊಳ್ಳಲ್ಲ ಎಂದಿದ್ದಾರೆ. ಆದರೆ ಸೇರಿಸಿಕೊಳ್ಳಬೇಕೆ ಬೇಡವೇ ಎಂದು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ತಿಳಿಸಿದರು.