ಹಾಸನ, ಏ.29- ದಶಕಗಳ ಇತಿಹಾಸದ ಹಿನ್ನೆಲೆ ಹೊಂದಿರುವ ಜಿಲ್ಲಾಧಿಕಾರಿ ಕಚೇರಿಯನ್ನು ಕೆಡವಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಸಜ್ಜಿತವಾಗಿರುವ ಜಿಲ್ಲಾಧಿಕಾರಿ ಕಟ್ಟಡ ಕೆಡವಿ ಹೊಸದಾಗಿ ನಿರ್ಮಾಣ ಮಾಡಲು ಬಿಡುವುದಿಲ್ಲ.
ಈ ಹಿಂದೆಯೇ ನವೀಕರಣಕ್ಕೆ 3 ಕೋಟಿ ರೂ. ವ್ಯಯ ಮಾಡಲಾಗಿದ್ದು, ಈಗಿರುವಂತಹ ಜಿಲ್ಲಾಧಿಕಾರಿ ಕಚೇರಿ ತೆರವು ಮಾಡಬಾರದು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕಚೇರಿ ಕೆಡವಿದ ಪಕ್ಷದಲ್ಲಿ ದೊಡ್ಡಳ್ಳಿ ಮಾದರಿ ಗೋಲಿಬಾರ್ ನಡೆಯಲು ಜಿಲ್ಲಾಧಿಕಾರಿಗಳು ಅವಕಾಶ ನೀಡಿದಂತಾಗಲಿದೆ ಎಂದು ರೇವಣ್ಣ ಎಚ್ಚರಿಸಿದರು. ಜಿಲ್ಲಾಧಿಕಾರಿಗಳು ಬಿಜೆಪಿಯ ರಬ್ಬರ್ ಸ್ಟಾಂಪ್ ರೀತಿ ವರ್ತಿಸುತ್ತಿದ್ದು, ಡಿಸಿ ಕಚೇರಿಯನ್ನು ಬಿಜೆಪಿ ಕಚೇರಿಯಾಗಿ ಪರಿವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈಗಿರುವ ತಾಲೂಕು ಕಚೇರಿ ಕೆಡವಿ ಹೊಸದಾಗಿ ನಿರ್ಮಾಣ ಮಾಡುವುದಕ್ಕೂ ವಿರೋಧ ವ್ಯಕ್ತಪಡಿಸಿದರು.