ರಾಯಚೂರು: ತ್ರಿಕೋನ ಪ್ರೇಮಕಥೆಯೊಂದು ದುರಂತ್ಯ ಅಂತ್ಯಕಂಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಹೌದು, ಅವನಿಗೆ ಮದುವೆ ಆಗಿದೆ. ಆದರೂ ಮತ್ತೊಂದು ಯುವತಿಯೊಂದಿಗೆ ಪ್ರೀತಿ ಪ್ರೇಮ ಮುಂದುವರೆಸಿದ್ದನು. ಆದರೆ ಇದೀಗ ಮೂವರು ಸಾವಿನ ದಾರಿ ಹಿಡಿದಿದ್ದಾರೆ.
ಇದೀಗ ಆತ್ಮಹತ್ಯೆಗೆ ಶರಣಾದ ಯುವತಿಯ ಹೆಸರು ಪಾರ್ವತಿ (34). ಈಕೆ ರಾಯಚೂರಿನ ಆರ್ ಟಿಪಿಎಸ್ ನಲ್ಲಿ ಮಹಿಳಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಕೈ ತುಂಬಾ ಸಂಬಳ ಬರುವ, ಇರೊಕ್ಕೊಂದು ಕ್ವಾಟ್ರಸ್ ಇದ್ದ ಈಕೆ ಬಿದ್ದಿದ್ದು ಈ ಸೋಮನಾಥನ ಪ್ರೀತಿಯ ಬಲೆಗೆ. ಆದರೆ ಇಲ್ಲಿ ಸಮಸ್ಯೆ ಬಂದಿದ್ದೇ ಸೋಮನಾಥನಿಗೆ ಈಗಾಗ್ಲೇ ಒಂದು ಮದುವೆ ಆಗಿದ್ದು. ಮದುವೆಯಾದ ಸೋಮನಾಥನನ್ನೇ ಪಾರ್ವತಿ ಪ್ರೀತಿಸಿದ್ದು, ಇದು ಸೋಮನಾಥನ ಪತ್ನಿಗೆ ಗೊತ್ತಾಗಿದೆ.ಹಾಗಾಗಿ ಈ ಪ್ರೀತಿ ಮೂವರನ್ನು ಬಲಿ ಪಡೆದುಕೊಂಡಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಸೋಮನಾಥ ಮತ್ತು ಪಾರ್ವತಿ ಇಬ್ಬರೂ ಒಟ್ಟಿಗೆ ಆರ್ ಟಿಪಿಎಸ್ ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಮದುವೆ ಆಗಿದ್ದರೂ ಸೋಮನಾಥನ ಮತ್ತು ಪಾರ್ವತಿ ಪ್ರೀತಿಸ್ತಿರೋದಾಗಿ ಆರೋಪ ಕೇಳಿ ಬಂದಿದೆ. ಕೆಲಸ ವೇಳೆ ಇಬ್ಬರೂ ಜೊತೆ ಜೊತೆಯಾಗಿ ಓಡಾಡುತ್ತಿದ್ದರಂತೆ. ಈ ವಿಚಾರ ಸೋಮನಾಥನ ಪತ್ನಿ ವೇದಾಗೆ ತಿಳಿದು, ಪತಿಯ ಕೆಲಸಕ್ಕೆ ನೊಂದು ಜನವರಿಯಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇತ್ತ ಹೆಂಡತಿ ಸಾವಿಗೆ ಮನನೊಂದು ಸೋಮನಾಥ ಕೂಡಾ ಜನವರಿಯಲ್ಲಿ ಸಾವನ್ನಪ್ಪಿದ್ದಾನೆ. ಇವರಿಬ್ಬರ ಸಾವಿಗೆ ನಾನು ಕಾರಣಳಾದೆ ಎಂದು ಮನನೊಂದಿದ್ದ ಪಾರ್ವತಿ, ಈ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ ಅದೃಷ್ಟವಶಾತ್ ಬದುಕುಳುದಿದ್ದಳು. ಜನ ಇಲ್ಲ-ಸಲ್ಲದು ಆರೋಪ ಮಾಡುತ್ತಿದ್ದಾರೆ. ಇದರಲ್ಲಿ ನನ್ನ ತಪ್ಪಿಲ್ಲ ಎಂದು ಪಾರ್ವತಿ ತಾಯಿ ಎದುರಿಗೆ ಹೇಳಿದ್ದಳು. ಮೊನ್ನೆ ತಾಯಿ ಹೊಲದ ಕೆಲಸಕ್ಕೆ ಎಂದು ಹೋದಾಗ ಯಾರೂ ಇಲ್ಲದಿದ್ದಾಗ ಪಾರ್ವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಪಾರ್ವತಿ ಸಾವಿಗೆ ಈ ತ್ರಿಕೋನ ಪ್ರೇಮವೇ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಡೆತ್ ನೋಟ್ ನಲ್ಲಿ ಮಾತ್ರ ಪಾರ್ವತಿ, ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾಳೆ.