ಬೆಂಗಳೂರು: ಅಂತಿಮಸಂಸ್ಕಾರ ಮಾಡಲಾಗಿದ್ದರೂ ಪೊಲೀಸರು ಶವವೊಂದನ್ನು ಹೊರಗೆ ತೆಗೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಕಡೂರು ಮೂಲದ ಮಂಜಪ್ಪ (45) ಎಂಬ ವ್ಯಕ್ತಿಯ ಶವವನ್ನು ಫೋರೆನ್ಸಿಕ್ ತಜ್ಞ ದಿನೇಶ್ ಅವರ ಸಮ್ಮುಖದಲ್ಲಿ ಹೊರಗೆ ತೆಗೆಸಿರುತ್ತಾರೆ.
ಮಾ. 17ರಂದು ಮಂಜಪ್ಪ ಅವರದ್ದು ಸಹಜ ಸಾವು ಎಂದು ಹೇಳಿ ಜಿಗಣಿಯ ರುದ್ರಭೂಮಿಯಲ್ಲಿ ಶವಸಂಸ್ಕಾರ ನಡೆಸಲಾಗಿತ್ತು.
ಆದರೆ ಅದಾಗಿ ವಾರದ ಬಳಿಕ ಅವರ ಸಾವಿನ ಕುರಿತು ಗುಸುಗುಸು ಕೇಳಲಾರಂಭಿಸಿದ್ದು, ಸಹಜ ಸಾವಲ್ಲ ಎಂಬ ವಿಷಯ ಹರಿದಾಡಲಾರಂಭಿಸಿತ್ತು. ಅಲ್ಲದೆ ಮಂಜಪ್ಪ ಸಾವಿನ ಕುರಿತು ಪತ್ನಿ ಸುಮಾ ಕೂಡ ಕೆಲವು ವಿಷಯ ಹೇಳಿದ್ದರಿಂದ ಶವ ಹೊರತೆಗೆಸಲಾಗಿದೆ.
ಆನೇಕಲ್ ತಾಲೂಕಿನ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಬಂಡೇನಲಸಂದ್ರದಲ್ಲಿ ಮಾ.16ರ ಸಂಜೆ ಪತ್ನಿ ಜತೆ ಬರುತ್ತಿದ್ದ ಮಂಜಪ್ಪ ಅವರನ್ನು ಗುಂಪೊಂದು ಅಡ್ಡಗಟ್ಟಿದೆ. ಪತ್ನಿಯನ್ನು ಬಿಟ್ಟು ಕಳಿಸಿದ್ದ ದುಷ್ಕರ್ಮಿಗಳು ಕೂಲಿ ಕೆಲಸಕ್ಕೆ ಬೇಕಾಗುವ ಚೆನಕೆ ಹಾರಕೆ ಕದ್ದಿರುವುದಾಗಿ ಆರೋಪಿಸಿ ಹಲ್ಲೆ ನಡೆಸಿತ್ತು ಎಂದು ಪತ್ನಿ ಸುಮಾ ಆರೋಪಿಸಿದ್ದರು.
ನನ್ನ ಪತಿ ಕಳ್ಳತನ ಮಾಡುವವರಲ್ಲ, ಯಾರಿಗೂ ತೊಂದರೆ ಕೊಡುವವರಲ್ಲ, ಅವರಿಗೆ ಸುಖಾಸುಮ್ಮನೆ ಹೊಡೆದು ಹಲ್ಲೆ ನಡೆಸಲಾಗಿದೆ. ಆ ಬಳಿಕ ಮೈಕೈ ನೋವು ಬಂದು, ನೋವು ತಾಳಲಾರದೆ ಸಾವಿಗೀಡಾಗಿದ್ದಾರೆ. ನಮ್ಮಲ್ಲಿ ಶವ ಹೂಳುವುದಕ್ಕೂ ಹಣ ಇರಲಿಲ್ಲ. ಮನೆ ಮಾಲೀಕರ ಸಹಾಯದಿಂದ ಅಂತಿಮ ಸಂಸ್ಕಾರ ಮಾಡಿದ್ದೇವೆ ಅಂತ ತಿಳಿಸಿದ್ದಾರೆ.
Laxmi News 24×7