ಬೆಂಗಳೂರು : ರಾಜ್ಯದ ನಗರ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳು ವಿಪರೀತ ಎನ್ನುವ ರೀತಿ ತಲೆಯೆತ್ತಿವೆ.
ಇದರಿಂದಾಗಿ ಸುಮಾರು 19,291 ಎಕರೆ ಭೂಮಿ ದುರ್ಬಳಕೆಯಾಗಿದ್ದು, ಈ ಅಕ್ರಮದಿಂದಾಗಿ ₹ 19,622 ಕೋಟಿ ಮೊತ್ತದ ತೆರಿಗೆ ವಂಚನೆ ನಡೆದಿದೆ.
ವಿಧಾನಮಂಡಲದಲ್ಲಿ ಮಾರ್ಚ್ 4ರಂದು ಮಂಡಿಸಿದ ‘ಕರ್ನಾಟಕ ಆರ್ಥಿಕ ಸಮೀಕ್ಷೆ 2021-22’ರಲ್ಲಿ ಈ ಅನಧಿಕೃತ ಬಡಾವಣೆಗಳ ನಿರ್ಮಾಣದ ಬಗ್ಗೆ ವಿವರಗಳಿವೆ. ಉದ್ಯಾನಗಳಿಗಾಗಿ ಮೀಸಲಿಟ್ಟಿದ್ದ 1,929 ಎಕರೆ ಹಾಗೂ ರಸ್ತೆಗಾಗಿ ಮೀಸಲಿಟ್ಟಿದ್ದ 964 ಎಕರೆ ಭೂಮಿ ಅನಧಿಕೃತ ಬಡಾವಣೆಗಳಿಗೆ ಬಳಕೆಯಾಗಿವೆ.
ನಿಯಮಬಾಹಿರವಾದ ಅಭಿವೃದ್ಧಿಯ ಪ್ರಮಾಣ ಒಟ್ಟು ನಗರ ಪ್ರದೇಶದ ಶೇ 30ರಿಂದ ಶೇ 40ರಷ್ಟು ಇದೆ. ಯೋಜನಾ ಪ್ರಾಧಿಕಾರ, ನಗರಾಭಿವೃದ್ಧಿ ಪ್ರಾಧಿಕಾರ, ನಗರ ಸ್ಥಳೀಯ ಸಂಸ್ಥೆಗಳು, ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯನ್ನು ಮೀರಿ ಅನಧಿಕೃತ ಬೆಳವಣಿಗೆಗಳು ನಡೆದಿವೆ. ಅನಧಿಕೃತ ಬಡಾವಣೆಗಳು, ಕಾಲೊನಿಗಳು ಹಾಗೂ ಕಂದಾಯ ಬಡಾವಣೆಗಳ ನಿರ್ಮಾಣಕ್ಕೆ ಒತ್ತುವರಿ ಮಾಡಿದ್ದರಿಂದಾಗಿ ನೈಸರ್ಗಿಕ ಚರಂಡಿಗಳು, ಕೆರೆಗಳು, ಜಲಾನಯನ ಪ್ರದೇಶಗಳು, ಉದ್ಯಾನಗಳು ಹಾಗೂ ಬಯಲು ಪ್ರದೇಶಗಳು ಕಣ್ಮರೆಯಾಗಿವೆ.
ರಾಜಧಾನಿಯಲ್ಲಿ ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದಲ್ಲಿ ಅಭಿವೃದ್ಧಿ ನಿಷೇಧಿಸಿ ಸುಪ್ರೀಂ ಕೋರ್ಟ್ ಆದೇಶದ ನೀಡಿದ್ದರೂ ಇಡೀ ಜಲಾನಯನ ಪ್ರದೇಶ ಅಕ್ರಮ ಬಡಾವಣೆಗಳಿಗೆ ಬಳಕೆಯಾಗಿದೆ. ಅರ್ಕಾವತಿ, ವೃಷಭಾವತಿ, ಕಾವೇರಿ ಹಾಗೂ ಇತರ ನದಿಗಳಿಗೆ ಸಂಸ್ಕರಿಸದ ಕೊಳಚೆ ನೀರು ಬಿಡಲಾಗುತ್ತಿದೆ ಹಾಗೂ ಕೈಗಾರಿಕಾ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ಅನಧಿಕೃತ ಬಡಾವಣೆಗಳಿಂದಾಗಿ ನಗರಗಳ ಒಟ್ಟಾರೆ ಅಭಿವೃದ್ಧಿಯ ಸಮೀಕರಣವು ಸಂಪೂರ್ಣವಾಗಿ ತೊಂದರೆಗೆ ಒಳಗಾಗುತ್ತಿದೆ ಎಂದು ಸಮೀಕ್ಷೆ ಕಳವಳ ವ್ಯಕ್ತಪಡಿಸಿದೆ.