ಬೆಂಗಳೂರು, ಡಿಸೆಂಬರ್ 31; ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಿಗೊಳಿಸುವ ವಿಚಾರ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ನಾಯಕರು ಈ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಶುಕ್ರವಾರ ಕೆಪಿಸಿಸಿ ಅಧ್ಯಕ್ಷಡಿ. ಕೆ. ಶಿವಕುಮಾರ್ಟ್ವೀಟ್ ಮಾಡಿ, “ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ದೇಗುಲಗಳಿಂದ ಸರ್ಕಾರದ ಖಜಾನೆಗೆ ಸಾಕಷ್ಟು ಆದಾಯ ಬರುತ್ತಿದೆ.
ಕೋವಿಡ್ ಪರಿಸ್ಥಿತಿಯಿಂದಾಗಿ ರಾಜ್ಯದ ಬೊಕ್ಕಸ ಖಾಲಿಯಾಗುತ್ತಿದೆ. ಇಂತಹ ಸಮಯದಲ್ಲಿ ಆದಾಯ ತರುತ್ತಿರುವ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ ಖಾಸಗಿಯವರಿಗೆ ಕೊಡುವುದೆಂದರೆ ಗಾಯದ ಮೇಲೆ ಬರೆ ಎಳೆದಂತೆ” ಎಂದು ಹೇಳಿದ್ದರು.
“ದೇಗುಲಗಳೇ ಆಗಲಿ, ಸಂಸ್ಥೆಗಳೇ ಆಗಲಿ ಸರ್ಕಾರದ ಸುಪರ್ದಿಯಲ್ಲಿರುವವರೆಗೆ ಅದು ಸಾರ್ವಜನಿಕರ ಆಸ್ತಿ.ಖಾಸಗಿಯವರಿಗೆ ಸೇರಿದ ನಂತರ ಅದರ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇರುವುದಿಲ್ಲ. ಸರ್ಕಾರಕ್ಕೆ ನಿಜವಾಗಿಯೂ ಬದ್ಧತೆ ಇದ್ದರೆ, ದೇಗುಲಗಳನ್ನು ತನ್ನ ನಿಯಂತ್ರಣದಲ್ಲೇ ಇಟ್ಟುಕೊಂಡು ಸಮಾಜದ ಎಲ್ಲ ವರ್ಗದವರನ್ನೂ ದೇಗುಲದ ಸಿಬ್ಬಂದಿಯನ್ನಾಗಿ ನೇಮಿಸಲಿ” ಎಂದು ಒತ್ತಾಯಿಸಿದ್ದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಡಿ. ಕೆ. ಶಿವಕುಮಾರ್ಗೆ ತಿರುಗೇಟು ಕೊಟ್ಟಿದ್ದಾರೆ. ಈ ಕುರಿತು ಅವರು ಫೇಸ್ ಬುಕ್ ಪೋಸ್ಟ್ ಹಾಕಿದ್ದು, ಡಿ. ಕೆ. ಶಿವಕುಮಾರ್ ಹಿಂದೂ ಹೌದ ಅಲ್ಲವಾ ಅನ್ನೋದರ ಬಗೆಗೆ ಸಂಶಯ ಬರೋದು ಸಹಜ ತಾನೇ? ಎಂದು ಪ್ರಶ್ನಿಸಿದ್ದಾರೆ.
ಸಿ. ಟಿ. ರವಿ ಪೋಸ್ಟ್ ಶುಕ್ರವಾರ ತಮ್ಮ ಫೇಸ್ ಬುಕ್ ಪೋಸ್ಟ್ನಲ್ಲಿ ಸಿ. ಟಿ. ರವಿ,
ಕಾಂಗ್ರೆಸ್ ನಾಯಕ, ಕೊತ್ವಾಲ್ ಶಿಷ್ಯ:
✓ ದೇಗುಲಗಳನ್ನು ಸರ್ಕಾರಿ ಸಾಮ್ಯದಿಂದ ಹಿಂದೂಗಳಿಗೆ ವಾಪಸು ನೀಡುವುದಕ್ಕೆ ವಿರೋಧ…
✓ ಗೋಹತ್ಯಾ ನಿಷೇಧಕ್ಕೆ ವಿರೋಧ…
✓ ಮತಾಂತರ ನಿಷೇಧ ಕಾಯಿದೆಗೆ ವಿರೋಧ….
✓ ರಾಮ ಮಂದಿರ ಪುನರ್ನಿರ್ಮಾಣಕ್ಕೆ ವಿರೋಧ..
✓ CAA ಗೆ ವಿರೋಧ… ಹಿಂದೂಗಳ ಪರವಾದ ಯಾವುದೇ ವಿಚಾರವಿದ್ದರೂ ಪ್ರತಿಬಾರಿಯೂ ಈತನ ವಿರೋಧ ಇದ್ದದ್ದೆ. ಈತ ಹಿಂದೂ ಹೌದ ಅಲ್ಲವಾ ಅನ್ನೋದರ ಬಗೆಗೆ ಸಂಶಯ ಬರೋದು ಸಹಜ ತಾನೇ? ಎಂದು ಕೇಳಿದ್ದಾರೆ.
ಸಿದ್ದರಾಮಯ್ಯ ಮಾತು; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ದೇವಾಲಯಗಳ ಕಾನೂನು ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ, “ಜನರನ್ನು ಭಾವನಾತ್ಮಕವಾಗಿ ಹಾದಿ ತಪ್ಪಿಸಲು ಎಷ್ಟೇ ಪ್ರಯತ್ನ ಮಾಡಿದರೂ ಜನರು ಬುದ್ಧಿವಂತರಿದ್ದಾರೆ. ತಾವೇನು ತೀರ್ಮಾನ ಮಾಡಬೇಕು ಅದನ್ನೇ ಜನ ಮಾಡುತ್ತಾರೆ” ಎಂದು ಹೇಳಿದ್ದಾರೆ.
“ಸಾಕಷ್ಟು ದೇವಾಲಯಗಳು ಆರ್ಥಿಕವಾಗಿ ಸಂಕಷ್ಟದಲ್ಲಿವೆ. ಹಿಂದೂ ದೇವಾಲಯಗಳನ್ನು ಸರ್ಕಾರ ಅಭಿವೃದ್ದಿಪಡಿಸುವ ಕೆಲಸ ಮಾಡಿದರೆ ನಮ್ಮ ತರಕಾರು ಇಲ್ಲ. ಸಾರಸಗಟಾಗಿ ಎಲ್ಲ ದೇವಾಲಯಗಳನ್ನು ಸ್ವತಂತ್ರಗೊಳಿಸುವ ಮೊದಲು ದೇವಾಲಯಗಳ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಬೇಕು” ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
“ರಾಜ್ಯದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ದೇವಾಲಯಗಳನ್ನು ಸ್ವತಂತ್ರಗೊಳಿಸಿದರೆ ಅವುಗಳನ್ನು ನಡೆಸಿಕೊಂಡು ಹೋಗುವುದು ಕಷ್ಟವಾಗಿ ಉಪಕಾರಕ್ಕಿಂತ ತೊಂದರೆಯೇ ಹೆಚ್ಚಾಗಲಿದೆ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.