ಹುಬ್ಬಳ್ಳಿ: ಲಾಕ್ಡೌನ್ ಎಫೆಕ್ಟ್ ನಿಂದ ಮದ್ಯ ಸಿಗದೆ ಮದ್ಯ ವ್ಯಸನಿಗಳು ಪರದಾಡುತ್ತಿದ್ದಾರೆ. ಈ ಮಧ್ಯೆ ಎಣ್ಣೆ ಸಿಗದೆ ವ್ಯಕ್ತಿಯೋರ್ವ ಸ್ಯಾನಿಟೈಸರ್ ಕುಡಿದು ಮೃತಪಟ್ಟ ಘಟನೆ ಕಲಘಟಗಿ ತಾಲೂಕಿನ ಗಂಬ್ಯಾಪುರ ಗ್ರಾಮದಲ್ಲಿ ನಡೆದಿದೆ.
ಗಂಬ್ಯಾಪುರ ಗ್ರಾಮದ ನಿವಾಸಿ ಬಸವರಾಜ್ ವೆಂಕಪ್ಪ ಕುರುವಿನಕೊಪ್ಪ(45) ಮೃತ ವ್ಯಕ್ತಿ. ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದ ಪರಿಣಾಮ ಮೂರು ದಿನಗಳ ಹಿಂದೆ ಬಸವರಾಜ್ ಅಸ್ವಸ್ಥಗೊಂಡಿದ್ದನು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಬಸವರಾಜ್ನನ್ನು ಕಿಮ್ಸ್ ಗೆ ದಾಖಲಿಸಲಾಗಿತ್ತು. ಆದರೆ ಕಿಮ್ಸ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಆತ ಸಾವನ್ನಪ್ಪಿದ್ದಾನೆ.
ಕೊರೊನಾ ಲಾಕ್ಡೌನ್ ಹಿನ್ನೆಲೆ ಮದ್ಯ ಮಾರಾಟ ಸ್ಥಗಿತಗೊಂಡಿದ್ದು, ಎಣ್ಣೆ ಸಿಗದೇ ಮದ್ಯ ಪ್ರಿಯರು ಬೇಸತ್ತು ಹೋಗಿದ್ದಾರೆ. ಈ ಹಿಂದೆ 21 ದಿನಗಳ ಲಾಕ್ಡೌನ್ ಏಪ್ರಿಲ್ 14ರಂದು ಮುಗಿಯುತ್ತೆ. ಆ ಬಳಿಕ ಮದ್ಯದ ಅಂಗಡಿ ತೆರೆಯುತ್ತೆ ಎಂದು ಮದ್ಯ ವ್ಯಸನಿಗಳು ಖುಷಿಯಲ್ಲಿದ್ದರು. ಆದರೆ ಲಾಕ್ಡೌನ್ ಅವಧಿಯನ್ನು ಮೇ 3ರವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ. ಈ ಹಿನ್ನೆಲೆ ಮದ್ಯ ಸಿಗುತ್ತದೆ ಎಂದು ಖುಷಿಯಲ್ಲಿದ್ದ ಮದ್ಯ ಪ್ರಿಯರ ಆಸೆಗೆ ಕಣ್ಣೀರು ಎರಚಿದಂತಾಗಿದೆ.