ಮೈಸೂರು: ಸಿದ್ದರಾಮಯ್ಯರಿಗೆ ಕೋವಿಡ್ ಬಂದ ಬಳಿಕ ತಾವು ಏನು ಮಾತನಾಡುತ್ತಿದ್ದೇನೆ ಎಂಬುವುದೇ ಅವರಿಗೆ ಗೊತ್ತಾಗುತ್ತಿಲ್ಲ. ಅವರಿಗೆ ತಾಲಿಬಾನ್ ಗೊತ್ತಿಲ್ಲ, ಬಿಜೆಪಿಯೂ ಗೊತ್ತಿಲ್ಲ. ಯಾವುದಕ್ಕೂ ಯಾವ ಸಂಬಂಧವೇ ಇಲ್ಲದೆ ಏನೇನೋ ಮಾತನಾಡುತ್ತಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಎಸ್ಎಸ್ ಬಗ್ಗೆ ತಿಳಿಯಬೇಕಾದರೆ ಯಾವುದಾದರು ಆರ್ ಎಸ್ಎಸ್ ಶಾಖೆಗೆ ಬರಲಿ. ಅವರು ಶಾಖೆಗೆ ಬರುವುದಾದರೆ ನಾನೇ ಅವರನ್ನು ಖುದ್ದಾಗಿ ಒಂದು ಶಾಖೆಗೆ ಕರೆದುಕೊಂಡು ಹೋಗುತ್ತೇವೆ. ಅವರಿಗೆ ಮಾನಸಿಕವಾಗಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಬೇಕಾದರೆ ತಿಳಿದುಕೊಂಡು ಹೇಳುತ್ತೇನೆ ಎಂದರು.
ದಸರಾ ತಯಾರಿ ಬಗ್ಗೆ ಮಾತನಾಡಿದ ಎಸ್ ಟಿಎಸ್, ದಸರಾಗೆ ಎಲ್ಲಾ ತಯಾರಿ ನಡೆದಿದೆ. ಸಂಜೆಯೊಳಗಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಅಂತಿಮವಾಗಲಿದೆ. ಹಂಸಲೇಖ ಸೇರಿದಂತೆ ನಾಡಿನ ಹಲವು ಕಲಾವಿದರಿಂದ ಕಾರ್ಯಕ್ರಮವಿದೆ. ಉದ್ಘಾಟನೆಗೆ 500 ಹಾಗೂ ಜಂಬೂ ಸವಾರಿಗೆ 1000 ಜನರಿಗೆ ಅವಕಾಶ ನೀಡಬೇಕೆಂದು ಎಂದು ತಜ್ಞರ ಸಮಿತಿ ಹೇಳಿದೆ. ಇದನ್ನು ಹೆಚ್ಚು ಮಾಡಲು ಕೇಳಿದ್ದೇನೆ ಎಂದರು.
ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಬಂದೇ ಬರುತ್ತಾರೆ. ಅಕ್ಟೋಬರ್ 6 ರಂದು ಸಿಎಂ ಮೈಸೂರಿಗೆ ಬರುತ್ತಾರೆ. ಬಳಿಕ ದಸರಾ ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತಾರೆ. ಆ ಬಳಿಕ ಏರ್ಪೋರ್ಟ್ನಲ್ಲಿ ರಾಷ್ಟ್ರಪತಿಗಳನ್ನ ಸ್ವಾಗತಿಸಿ ಚಾಮರಾಜನಗರ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
Laxmi News 24×7