ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬ್ಲ್ಯಾಕ್ಮೇಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಿಗೆ ಜಾಮೀನು ನೀಡಬೇಡಿ ಎಂದು ಎಸ್ಐಟಿ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದೆ..
ಆರೋಪಿಗಳು ಇದೂವರೆಗೂ ತನಿಖೆಗೆ ಸಹಕಾರ ನೀಡಿಲ್ಲ. ಸಿಡಿ ರಿಲೀಸ್ ಆದ ದಿನವೇ ತಲೆ ಮರೆಸಿಕೊಂಡಿದ್ದಾರೆ. ಎಷ್ಟು ಬಾರಿ ನೋಟಿಸ್ ಕೊಟ್ಟರೂ ವಿಚಾರಣೆಗೆ ಹಾಜರಾಗಿಲ್ಲ. ದೂರುದಾರರಿಗೆ ಬೆದರಿಕೆ ಹಾಕಿದ್ದಕ್ಕೆ ಸಾಕ್ಷ್ಯಗಳಿದ್ದು, ಹೊರರಾಜ್ಯದಲ್ಲಿ ಯುವತಿಯ ಜೊತೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳಿವೆ. ಸಾಕ್ಷ್ಯಗಳ ಪ್ರಕಾರ ಕೆಲವೊಂದು ವೀಡಿಯೋ ತುಣುಕುಗಳನ್ನು ದೂರುದಾರರಿಗೆ ನೀಡಿದ್ದಾರೆ
. ಆರೋಪಿಗಳು ಯುವತಿಯ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಆಕ್ಷೇಪಣೆ ಸಲ್ಲಿಕೆಯಲ್ಲಿ ಎಸ್ಐಟಿ ಹೇಳಿದೆ. ದೂರಿನ ಅನ್ವಯ ಆರೋಪಿಗಳು ಕೆಲವೊಂದು ಕಡೆ ಆಸ್ತಿ ಖರೀದಿಗೆ ಪ್ರಯತ್ನಿಸಿದ್ದಾರೆ. ಆರೋಪಿಗಳ ವಿಚಾರಣೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಜಾಮೀನು ಸಿಕ್ಕರೆ ವಿಚಾರಣೆಗೆ ಸರಿಯಾಗಿ ಸಹಕಾರ ನೀಡುವುದಿಲ್ಲ ಅನ್ನೋ ಅನುಮಾನ ಇದೆ. ಆರೋಪಿಗಳ ಚಟುವಟಿಕೆ ಬಗ್ಗೆ 17 ಸಾಕ್ಷ್ಯಗಳಿವೆ. 17 ಸಾಕ್ಷ್ಯಗಳ ಬಗ್ಗೆ ಸಿಆರ್ ಪಿಸಿ 164 ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಜೊತೆ ಯುವತಿ ನೇರ ಸಂಪರ್ಕ ಹೊಂದಿದ್ದಾರೆ.
ಇನ್ನು ಆರೋಪಿಗಳು ಆರ್ಥಿಕವಾಗಿ ಚೆನ್ನಾಗಿಲ್ಲ. ಆದರೂ ಸಾಕಷ್ಟು ಕಡೆ ಆಸ್ತಿ ಖರೀದಿಗೆ ಮುಂದಾಗಿದ್ದಾರೆ. 17 ಜನರ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲು ಮಾಡಲಾಗಿದೆ. ಆರೋಪಿಗಳ ವಿರುದ್ಧ 17 ಜನ ಸಾಕ್ಷ್ಯ ನುಡಿದಿದ್ದಾರೆ. ಪ್ರಭಾವ ಬಳಸಿ ತಪ್ಪಿಸಿಕೊಳ್ಳುವ ತಂತ್ರಗಾರಿಕೆ ಇದೆ. ಆರೋಪಿಗಳ ವಿರುದ್ಧ ಕೆಲವೊಂದು ಹಳೆಯ ಆರೋಪಗಳಿವೆ. ಆ ಅನುಮಾನ ಇರೋದರಿಂದ ಜಾಮೀನು ನೀಡಬೇಡಿ ಎಂದು ನ್ಯಾಯಾಲಯ ಮುಂದೆ ಎಸ್ಐಟಿ ಮನವಿ ಮಾಡಿಕೊಂಡಿದೆ.
ಪ್ರಕರಣದ ಶಂಕಿತರಾಗಿದ್ದ ನರೇಶ್ ಮತ್ತು ಶ್ರವಣ್ ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಪೊಲೀಸರು ಈ ಇಬ್ಬರನ್ನು ಬಂಧಿಸಲು ವಿಶೇಷ ತಂಡ ರಚಿಸಿ ದಾಳಿ ಮಾಡಿದ್ದರು. ಪೊಲೀಸರ ಕೈಗೆ ಸಿಗದೇ ನಾಪತ್ತೆಯಾಗಿದ್ದ ಇಬ್ಬರು ಈಗ ನಿರೀಕ್ಷಣಾ ಜಾಮೀನಿನ ಮೊರೆ ಹೋಗಿದ್ದಾರೆ.