ಬೆಂಗಳೂರು : ಸಾರಿಗೆ ನೌಕರರ ಮುಷ್ಕರ ಇಂದಿಗೆ 6ನೇ ದಿನಕ್ಕೆ ಕಾಲಿಟ್ಟಿದೆ. 6ನೇ ವೇತನ ಆಯೋಗದ ಶಿಫಾರಸ್ಸಿಗೆ ಒತ್ತಾಯಿಸಿ ನಡೆಸುತ್ತಿರುವಂತ ಮುಷ್ಕರ ಇಂದು ತಾರಕ್ಕಕ್ಕೂ ಏರವಿದೆ. ಇಂದಿನಿಂದ ಸಾರಿಗೆ ನೌಕರರು ಬೀದಿಗೆ ಇಳಿಯಲಿದ್ದು, ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿಗಳ ಮುಂದೆ ತಟ್ಟೆ, ಜಾಗಟೆ ಬಾರಿಸುವ ಮೂಲಕ, ತಮ್ಮ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಿದ್ದಾರೆ. ಇದರ ನಡುವೆ ಇಂದು ಯುಗಾದಿ ಹಬ್ಬದ ಮುನ್ನಾದಿನವಾದ್ದರಿಂದ ಸಾರಿಗೆ ನೌಕರರ ಮುಷ್ಕರದ ಬಿಸಿ, ಊರಿಗೆ ಹೋಗೋ ಪ್ರಯಾಣಿಕರ ಮೇಲೆ ಬೀಳಲಿದೆ. ಈ ಮೂಲಕ ಇಂದು ಯಥಾಸ್ಥಿತಿಗೆ ಬರಲಿದೆ ಎನ್ನುವ ಸಾರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯ ಮುಂದುವರೆಯಲಿದೆ ಎನ್ನಲಾಗುತ್ತಿದೆ.
ನಿನ್ನೆ ಕೆಎಸ್ ಆರ್ ಟಿ ಸಿ ಮುಖ್ಯ ವ್ಯವಸ್ಥಾಪಕಾದಂತ ಪ್ರಭಾಕರ ರೆಡ್ಡಿ ಮಾತನಾಡಿ, ಸಾರಿಗೆ ನೌಕರರ ಮುಷ್ಕರ ಆರಂಭಗೊಂಡ ಸಂದರ್ಭದಲ್ಲಿ ತಮ್ಮ ತಮ್ಮ ಮೊಬೈಲ್ ಗಳನ್ನು ನೌಕರರು ಸ್ವಿಚ್ ಆಫ್ ಮಾಡಿದ್ದರು. ಮೊದಲ ಮತ್ತು ಎರಡನೇ ದಿನದಲ್ಲಿ ಹೀಗೆ ಮಾಡಿದ್ದರು. ಈಗ ಬಹುತೇಕ ನೌಕರರು ಆನ್ ಮಾಡಿದ್ದಾರೆ. ಅವರನ್ನು ಸಂಪರ್ಕಿಸಿ ಸಾರಿಗೆ ಬಸ್ ಸಂಚಾರ ಆರಂಭ ಕುರಿತಂತೆ ಮಾತನಾಡಲಾಗುತ್ತಿದೆ ಎಂದರು.
ಈಗಾಗಲೇ ಇಂದು 2 ಸಾವಿರಕ್ಕೂ ಹೆಚ್ಚು ಬಸ್ ಗಳ ಸಂಚಾರ ಆರಂಭಗೊಂಡಿದೆ. ನಾಳೆ ಯುಗಾದಿ ಹಬ್ಬದ ಮುನ್ನಾ ದಿನವಾದ್ದರಿಂದ ಮತ್ತಷ್ಟು ಬಸ್ ಗಳ ಸಂಚಾರಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಸಾರಿಗೆ ಸಿಬ್ಬಂದಿಗಳು ಮುಷ್ಕರದ ನಡುವೆಯೂ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂಬ ವಿಶ್ವಾಸವಿದೆ. ಹೀಗಾಗಿ ಇಂದು ಸಾರಿಗೆ ಬಸ್ ಗಳ ಸಂಚಾರ ಯಥಾಸ್ಥಿತಿಯತ್ತ ಮರಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು.
ಆದ್ರೇ.. ರಾಜ್ಯ ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ನಾ ಕೊಡೆ, ನಾ ಬಿಡೆ ಎನ್ನುವ ಸಂಘರ್ಷ 6ನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರ ನಿರತರನ್ನು ಮನವೊಲಿಸೋ ಪ್ರಯತ್ನಕ್ಕೆ ಇಳಿದಯಂತ ರಾಜ್ಯ ಸರ್ಕಾರ, ವಿವಿಧ ತಂತ್ರಗಾರಿಕೆ ಮೂಲಕ ನೌಕರರನ್ನು ಮುಷ್ಕರದಿಂದ ಸೇವೆಗೆ ಮರಳೋದಕ್ಕೆ ಪ್ರಯತ್ನಕ್ಕಿಳಿದಿದೆ. ಇದರ ಮಧ್ಯೆ ನಾಳೆಯಿಂದ ರಾಜ್ಯ ಸರ್ಕಾರ ವಿರುದ್ಧ ಸಾರಿಗೆ ನೌಕರರು ಸಿಡಿದೆದ್ದಿದ್ದು, ತಮ್ಮ ಪ್ರತಿಭಟನೆಯನ್ನು ಮತ್ತೆ ತೀವ್ರಗೊಳಿಸಿದ್ದಾರೆ. ಇಂದು ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಕಚೇರಿ ಮುಂದೆ ತಟ್ಟೆ, ಜಾಗಟೆ ಬಡಿಯುವ ಮೂಲಕ ಪ್ರತಿಭಟನೆ ನಡೆಸೋದಕ್ಕೆ ಮುಂದಾಗಿದ್ದಾರೆ.
ಈ ಕುರಿತಂತೆ ನಿನ್ನೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ ನೀಡಿದ್ದು, ನಾಳೆಯಿಂದ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಮತ್ತಷ್ಟು ಹೋರಾಟವನ್ನು ತೀವ್ರಗೊಳಿಸಲಿದ್ದೇವೆ. ಇಂದು ಬೆಳಿಗ್ಗೆ 11 ಗಂಟೆಯಿಂದ ರಾಜ್ಯಾಧ್ಯಂತ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಕಚೇರಿಯ ಮುಂದೆ ತಟ್ಟೆ, ಜಾಗಟೆ ಬಡಿಯುವುದರೊಂದಿಗೆ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಮೂಲಕ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂಬುದಾಗಿ ತಿಳಿಸಿದ್ದರು.
ಮತ್ತೊಂದೆಡೆ ಸಾರಿಗೆ ನೌಕರರ ಮುಷ್ಕರಕ್ಕೆ ಸೊಪ್ಪು ಹಾಕದ ರಾಜ್ಯ ಸರ್ಕಾರ, ನೌಕರರ ವಿರುದ್ಧ ವರ್ಗಾವಣೆ ಅಸ್ತ್ರ, ವಜಾಗೊಳಿಸುವಂತ ಕ್ರಮ ಕೈಗೊಂಡಿದೆ. ಅಲ್ಲದೇ ಮುಷ್ಕರ ನಿರತ ನೌಕರರ ಮಾರ್ಚ್ ತಿಂಗಳ ವೇತನ ಕೂಡ ತಡೆ ಹಿಡಿದಿದೆ. ಮುಷ್ಕರದಲ್ಲಿ ಪಾಲ್ಗೊಳ್ಳದೇ ಕೆಲಸ ನಿರ್ವಹಿಸುತ್ತಿರುವಂತ ಸಾರಿಗೆ ನೌಕರರಿಗೆ ಮಾರ್ಚ್ ತಿಂಗಳ ವೇತನ ಇಂದು ನೀಡಲಾಗುತ್ತಿದೆ ಎಂಬುದಾಗಿ ಹೇಳಿದೆ. ಅಲ್ಲದೇ ಸಾರಿಗೆ ಬಸ್ ಪಾಸ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಂತ ಪ್ರಯಾಣಿಕರಿಗೆ ಮುಷ್ಕರದ ಅವಧಿಯಷ್ಟು ದಿನ, ಬಸ್ ಪಾಸ್ ವ್ಯಾಲಿಡಿಟಿ ವಿಸ್ತರಣೆಯಂತ ಕ್ರಮವನ್ನು ಕೂಡ ಕೈಗೊಂಡಿದೆ.
ಈ ಎಲ್ಲಾ ಬೆಳವಣಿಗೆಯಿಂದಾಗಿ, ಇಂದು ಸಹ 6ನೇ ದಿನವಾದಂತ ಸಂದರ್ಭದಲ್ಲಿ, ಸಾರಿಗೆ ನೌಕರರ ಮುಷ್ಕರ ಮುಂದುವರೆಯಲಿದೆ. ಸಾರಿಗೆ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಯುಗಾದಿ ಹಬ್ಬಕ್ಕೆ ತೆರಳೋ ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದ್ದು, ಬಸ್ ಸಿಗೋದು ಡೌಟ್ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.