ಬೆಳಗಾವಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಗ್ರಾಮಕ್ಕೆ ತೆರಳಲು ಸಾಧ್ಯವಾಗದೇ ಬಾಣಂತಿ ಮತ್ತು ಆಕೆಯ ತಾಯಿ ಕಣ್ಣೀರು ಹಾಕಿರುವ ಘಟನೆ ನಗರದಲ್ಲಿ ನಡೆದಿದೆ. ಶನಿವಾರ ಬಾಣಂತಿಯನ್ನು ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಬೆಳಗಾವಿ ಜಿಲ್ಲೆ ಗೋಕಾಕ್ ನಿವಾಸಿ ಗೀತಾ ತನ್ನ ಮಗು, ತಂದೆ ತಾಯಿ ಜೊತೆ ಊರಿಗೆ ತೆರಳಲು
ಪರದಾಡುತ್ತಿದ್ದರು. ಕರ್ನಾಟಕ ಲಾಕ್ಡೌನ್ ಹಿನ್ನೆಲೆ ಯಾವುದೇ ವಾಹನ ಸಿಗದಿದ್ದಕ್ಕೆ ಬಾಣಂತಿ ತಾಯಿ ಕಣ್ಣೀರು ಹಾಕಿದ್ದರು. ಇಂದು ಸಹ ಯಾವುದೇ ವಾಹನ ಸಿಗದಕ್ಕೆ ಸಹಾಯಕ್ಕಾಗಿ ಕುಟುಂಬದವರು ಬೆಳಗಾವಿ ನಗರದ ಮಾರ್ಕೆಟ್ ಠಾಣೆ ಎದುರು ಕುಳಿತ್ತಿದ್ದರು. ಸಮಾಜ ಸೇವಕ ಸುರೇಂದ್ರ ಅನಗೋಳಕರ್ ಠಾಣೆಯ ಮುಂದೆ ಕುಳಿತಿದ್ದ ಕುಟುಂಬಕ್ಕೆ ನೆರವಾಗಿದ್ದಾರೆ. ತಮ್ಮ ಸ್ವಂತ ವಾಹನದಲ್ಲಿ ಎಲ್ಲರನ್ನು ಗೋಕಾಕ್ ಪಟ್ಟಣಕ್ಕೆ ಕರೆದುಕೊಂಡು ಹೋಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.