Breaking News

ಹುಬ್ಬಳ್ಳಿ: ಕಿಮ್ಸ್‌ ಸಿಬ್ಬಂದಿಗೆ ಸಿಗದ ಕೋವಿಡ್ ಭತ್ಯೆ

Spread the love

ಹುಬ್ಬಳ್ಳಿ: ಜೀವದ ಹಂಗು ತೊರೆದು ಕೋವಿಡ್-19‌ ರೋಗಿಗಳ ಚಿಕಿತ್ಸೆ ಮತ್ತು ಆರೈಕೆ ಮಾಡಿದ ಕಿಮ್ಸ್‌ ಆಸ್ಪತ್ರೆಯ ವೈದ್ಯಕೀಯ, ಅರೆ ವೈದ್ಯಕೀಯ, ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ ಸರ್ಕಾರ ಘೋಷಿಸಿದ್ದ ₹5 ಸಾವಿರ ಕೋವಿಡ್‌ ಭತ್ಯೆ ಇನ್ನೂ ಸಿಕ್ಕಿಲ್ಲ.

ಕೆಇಎಯಿಂದ (ವೈದ್ಯಕೀಯ ಇಲಾಖೆ) ನೇಮಕವಾದ 149 ನರ್ಸಿಂಗ್ ಅಧಿಕಾರಿಗಳು, ಕಿಮ್ಸ್‌ನಿಂದ ನೇರವಾಗಿ ಗುತ್ತಿಗೆ ಆಧಾರದಲ್ಲಿ ನೇಮಕವಾದ 79 ಸಿಬ್ಬಂದಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 39, ಕ್ಯಾಟ್‌ಲಾಬ್‌ನ 20 ಹಾಗೂ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ (ಪಿಎಂಎಸ್‌ಎಸ್‌ವೈ) ನೇಮಕವಾಗಿದ್ದ 82 ಮಂದಿ ಸೇರಿದಂತೆ ಒಟ್ಟು 375 ಮಂದಿ ಕೋವಿಡ್ ಕರ್ತವ್ಯ ನಿರ್ವಹಿಸಿದ್ದರು.

‘ಕೋವಿಡ್‌ ಸಂದರ್ಭದಲ್ಲಿ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸುವ ಆರೋಗ್ಯ ಸಿಬ್ಬಂದಿಗೆ ಸರ್ಕಾರ ಕಳೆದ ಜುಲೈನಲ್ಲಿ ಕೋವಿಡ್ ಭತ್ಯೆ ಘೋಷಿಸಿತ್ತು. ತಿಂಗಳಿಗೆ ₹5 ಸಾವಿರದಂತೆ ಆರು ತಿಂಗಳವರೆಗೆ ಭತ್ಯೆ ನೀಡುವಂತೆ ಆರೋಗ್ಯ ಇಲಾಖೆಗೆ ಸೂಚಿಸಿತ್ತು. ಆದರೆ, ಕಿಮ್ಸ್‌ನಲ್ಲಿ 375 ಮಂದಿಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ’ ಎಂದು ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ನಾಗರಾಜ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲಾಡಳಿತದಿಂದ ಕೋವಿಡ್ ನಿಮಿತ್ತ ಆರು ತಿಂಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡಿದ್ದವರಿಗೆ ಭತ್ಯೆ ಪಾವತಿಸಲಾಗಿದೆ. ನಮಗೆ ಕೊಡಲು ಮೀನಮೇಷ ಎಣಿಸುತ್ತಿದ್ದಾರೆ. ಕಾರಣ ಕೇಳಿದರೆ ಅನುದಾನವಿಲ್ಲ ಎಂದು ನೆಪ ಹೇಳುತ್ತಾರೆ. ಕಟ್ಟಡಕ್ಕೆ ಬಣ್ಣ ಬಳಿಯಲು, ಸೌಂದರ್ಯೀಕರಣಕ್ಕೆ ಹಣವಿರುತ್ತದೆ. ಸಂಕಷ್ಟದ ನಡುವೆಯೂ ಕೆಲಸ ಮಾಡಿದವರಿಗೆ ಭತ್ಯೆ ಕೊಡಲು ಮಾತ್ರ ಇವರ ಬಳಿ ಹಣವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪಿಪಿಇ ಕಿಟ್‌ ಧರಿಸಿ ಕರ್ತವ್ಯ ನಿರ್ವಹಿಸಿದವರ ಕಷ್ಟ ಮಾಡಿದವರಿಗೇ ಗೊತ್ತು. ಒಮ್ಮೆ ಕಿಟ್ ಧರಿಸಿ ಕರ್ತವ್ಯದ ಅವಧಿ ಮುಗಿಯುವವರೆಗೆ ತೆಗೆಯುವಂತಿಲ್ಲ. ಈ ಮಧ್ಯೆ ನೀರು ಸಹಿತ ಕುಡಿಯದಂತೆ ಕರ್ತವ್ಯ ನಿರ್ವಹಿಸಿದ್ದೇವೆ. ನಮ್ಮ ಶ್ರಮಕ್ಕೆ ಸರ್ಕಾರ ಘೋಷಿಸಿರುವ ಭತ್ಯೆ ನೀಡಲು ಯಾಕೆ ನಿರ್ಲಕ್ಷ್ಯ ತೋರುತ್ತಿದ್ದಾರೊ ಗೊತ್ತಿಲ್ಲ’ ಎಂದು ಕಿಮ್ಸ್ ಸಿಬ್ಬಂದಿ ಉಮಾ ಅಸಮಾಧಾನ ತೋರಿದರು.


Spread the love

About Laxminews 24x7

Check Also

ಹಾಸನ ಜನರ ಹೃದಯ ಹಿಂಡುತ್ತಿರುವ ಹೃದಯಾಘಾತ: ಕೊನೆಗೂ ಎಚ್ಚೆತ್ತ ಜಿಲ್ಲಾಡಳಿತ

Spread the loveಹಾಸನ, ಜೂನ್​ 30: ಹಾಸನ (Hassan) ಜಿಲ್ಲೆಯಲ್ಲಿ ಹೃದಯಘಾತದಿಂದ (Heart Attack) ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ