ಮಂಡ್ಯ: ‘ಕಾಂಗ್ರೆಸ್ ಮುಖಂಡರು ತಮ್ಮ ತೀಟೆ ತೀರಿಸಿಕೊಳ್ಳಲು ಜೆಡಿಎಸ್ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದರು. ಕಾಂಗ್ರೆಸ್ನ ಆಶ್ರಯದಿಂದ ನಮ್ಮ ರಾಜಕೀಯ ಜೀವನ ನಡೆಯುತ್ತಿಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಗುರುವಾರ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ಅವರು ಜೆಡಿಎಸ್ನಲ್ಲಿ ಇದ್ದಾಗ ಹೆಚ್ಚಿನ ಸ್ಥಾನ ಗೆದ್ದಿರುವುದಾಗಿ ಹೇಳಿದ್ದಾರೆ. ಆದರೆ 1999ರಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ನಾನು, ದೇವೇಗೌಡರು ಸೋತಿದ್ದೆವು. ಆಗ ಕೇವಲ 10 ಸ್ಥಾನ ಗೆದ್ದಿದ್ದೆವು’ ಎಂದರು.
‘2004ರಲ್ಲಿ 58 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೆವು. ಅದಕ್ಕೆ ಸಿದ್ದರಾಮಯ್ಯ ಕಾರಣರಲ್ಲ, ಪಿಜಿಆರ್ ಸಿಂಧ್ಯಾ, ಎಂಪಿ ಪ್ರಕಾಶ್ ಮುಂತಾದವರು ಕಾರಣ. ಪಕ್ಷ ಸಂಘಟನೆಗಾಗಿ ಇಂದು ನನ್ನದು ಏಕಾಂಗಿ ಹೋರಾಟ, ಆದರೂ ನಾನು ಉತ್ತಮ ಸ್ಥಾನ ಗಳಿಸಿದ್ದೆ. ಸಿದ್ದರಾಮಯ್ಯ ನಮಗೆ ಕೈಕೊಟ್ಟು ಹೋದಾಗ ಕೇಲವ 500 ವೋಟುಗಳಿಂದ ಗೆದ್ದಿದ್ದರು. ಅದೂ ಪೀಟರ್ ಎಂಬಾತ ಬಂದು ಗೆಲ್ಲಿಸಿದ್ದ, ಅದು ಅವರ ಗೆಲುವುಲ್ಲ’ ಎಂದರು.
‘ಜೆಡಿಎಸ್ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಸಿದ್ದರಾಮಯ್ಯ ಅವರಿಗಿಲ್ಲ. ಅವರು ಜವಾಬ್ದಾರಿಯಿಂದ ಮಾತನಾಡಬೇಕು. ಸಾಲ ಮನ್ನಾ ಮಾಡಲು ಸಿದ್ದರಾಮಯ್ಯ ಬೆಂಬಲ ನೀಡಲಿಲ್ಲ, ಅದೂ ನನ್ನ ಏಕಾಂಗಿ ಹೋರಾಟವಾಗಿತ್ತು’ ಎಂದರು.