ಬೆಳಗಾವಿ (ಫೆ. 9); ಉತ್ತರ ಕರ್ನಾಟಕದ ಶಕ್ತಿ ದೇವತೆ ಸವದತ್ತಿ ಯಲ್ಲಮ್ಮ. 11 ತಿಂಗಳ ಬಳಿಕ ದೇವಾಲಯ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಲಕ್ಷಾಂತರ ಜನ ಭಕ್ತ ಸಾಗರ ಹರಿದು ಬರುತ್ತಿದೆ. ಪ್ರತಿ ಮಂಗಳವಾರ, ಶುಕ್ರವಾರ ಒಂದು ಲಕ್ಷ ಭಕ್ತರು ದೇವಸ್ಥಾನಕ್ಕೆ ಬರುತ್ತಿದ್ದಾರೆ. ಪ್ರತಿ ದಿನ ದೇವಿಯ ದರ್ಶನ ಪಡೆಯಲು 20 ಸಾವಿರ ಜನ ಬರುತ್ತಿದ್ದಾರೆ. ಭಕ್ತರನ್ನು ನಿಯಂತ್ರಿಸಲು ಆಡಳಿತ ಮಂಡಳಿ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಇರುವ ಅಧಿದೇವತೆ ಯಲ್ಲಮ್ಮ, ಈ ದೇವಿಗೆ ರಾಜ್ಯ ಸೇರಿ ಗೋವಾ, ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶ, ತೆಲಂಗಾಣ ಸೇರಿ ದೇಶದ ವಿವಿಧ ಭಾಗದಲ್ಲಿ ಭಕ್ತರು ಇದ್ದಾರೆ. ಕೋವಿಡ್ ಸೋಂಕಿನ ಕಾರಣದಿಂದ ಹನ್ನೊಂದು ತಿಂಗಳು ದೇವಾಲಯ ಭಕ್ತರ ಪ್ರವೇಶ ನಿಷೇಧ ಮಾಡಲಾಗಿತ್ತು. ಫೆ .1 ರಿಂದ ದೇವಾಲಯದ ಬಾಗಿಲು ತೆರೆದಿದ್ದು ಭಕ್ತರ ದಂಡು ಬರುತ್ತಿದೆ. ಇಲ್ಲಿಗೆ ಬರುವ ಭಕ್ತರು ದೇವಿಯ ದರ್ಶನ ಪಡೆದು ಖುಷಿಯಾಗಿ ತಮ್ಮ ಬೇಡಿಕೆ, ಹರಕೆಯನ್ನು ಅರ್ಪಣೆ ಮಾಡುತ್ತಿದ್ದಾರೆ.
ಪ್ರತಿ ಮಂಗಳವಾರ, ಶುಕ್ರವಾರ ಒಂದು ಲಕ್ಷ ಜನ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ದೇವಾಲಯ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಜನ ಸಾಗರ. ಭಕ್ತರು ಧರ್ಮ ದರ್ಶನ, ವಿಶೇಷ ದರ್ಶನ ಪಡೆಯುತ್ತಿದ್ದಾರೆ. ಟ್ರ್ಯಾಕ್ಟರ್, ಎತ್ತಿನ ಗಾಡಿ ಹಾಗೂ ಬಸ್ ಮೂಲಕ ಬರುವ ಭಕ್ತರು ಯಲ್ಲಮ್ಮನ ಗುಡ್ಡದಲ್ಲಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಸ್ವಚ್ಛತೆಯ ದೃಷ್ಟಿಯಿಂದ ದೇವಸ್ಥಾನ ಆಡಳಿತ ಮಂಡಳಿ ದೇವಸ್ಥಾನ ಸುತ್ತಮುತ್ತಲಿನ ಅಂಗಡಿ ತೆರವು ಮಾಡಿದೆ. ಜತೆಗೆ ಆವರಣದಲ್ಲಿ ಪಡ್ಲಿಗಿ ತುಂಬುವುದು ಸೇರಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲ. ದೇವಸ್ಥಾನದಲ್ಲಿ ಹೂ, ಭಂಡಾರ ಚೆಲ್ಲುವುದಕ್ಕೂ ಸಹ ನಿರ್ಬಂಧ ಹೇರಲಾಗಿದೆ. ಸ್ವಚ್ಛತೆ ಬಗ್ಗೆ ಆಡಳಿತ ಮಂಡಳಿ ಕ್ರಮ ಕೈಗೊಂಡಿದ್ದು ಭಕ್ತರು ಸಹಕಾರ ನೀಡಬೇಕು ಎಂದು ಆಡಳಿತ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೊಟಾರಗಸ್ತಿ ಹೇಳಿದ್ದಾರೆ.