ಬೆಂಗಳೂರು (ಜ. 30): ಕನ್ನಡ ಜಾಗೃತಿ ಕೆಲಸಕ್ಕೆ ಮುಂದಾಗಿರುವ ಬಿಬಿಎಂಪಿ ಇದಕ್ಕಾಗಿ ಮಹತ್ವದ ಹೆಜ್ಜೆಯನ್ನು ಇರಿಸಿದೆ. ಇನ್ಮುಂದೆ ಸಿಲಿಕಾನ್ ಸಿಟಿಯ ಅಂಗಡಿಗಳಲ್ಲಿ ಕನ್ನಡ ನಾಮಫಲಕಗಳು ಕಡ್ಡಾಯ ಮಾಡಿದೆ. ಒಂದು ವೇಳೆ ಅಂಗಡಿಗಳಲ್ಲಿ ಕನ್ನಡ ನಾಮಫಲಕಗಳು ಕಂಡು ಬರದಿದ್ದರೆ ಅಂಗಡಿಗಳ ವ್ಯಾಪಾರ ಪರವಾನಿಗೆ (ಟ್ರೇಡ್ ಲೈಸೆನ್ಸ್ನ್ನು) ರದ್ದುಮಾಡುವುದಾಗಿ ತಿಳಿಸಿದೆ. ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ಕನ್ನಡ ಉಳಿಕೆಗೆ ಬಿಬಿಎಂಪಿ ದಿಟ್ಟ ಹೆಜ್ಜೆ ಇರಿಸಿದೆ. ಅಂಗಡಿಗಳಲ್ಲಿ ಮಾತ್ರವಲ್ಲದೇ, ಕಟ್ಟಡ ಮತ್ತು ಕಚೇರಿಗಳಲ್ಲೂ ಕನ್ನಡ ನಾಮಫಲಕ ಕಡ್ಡಾಯವಾಗಿದೆ. ಒಂದು ವೇಳೆ ಕನ್ನಡದಲ್ಲಿ ನಾಮಫಲಕಗಳು ಕಂಡು ಬರದಿದ್ದರೆ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ . ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಕಾಯಕ ವರ್ಷಾಚರಣೆ ಹೆಸರಿನಲ್ಲಿ ಒಂದು ವರ್ಷದ ಯೋಜನೆ ಹಮ್ಮಿಕೊಂಡಿದ್ದು, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಾರ್ಯಕ್ರಮ ಜರುಗಿತು .ಕನ್ನಡ ಬಾವುಟದ ಕೆಂಪು ಹಾಗೂ ಹಳದಿ ಬಣ್ಣದಿಂದ ಕಂಗೊಳಿಸುತ್ತಿರುವ ಕಾರಲ್ಲಿ ಕನ್ನಡದ ಘೋಷಣೆ, ಕನ್ನಡದ ಮಹತ್ವವನ್ನು ಸಾರಲಾಗಿದ್ದು, ಈ ಕಾರು ಬೆಂಗಳೂರಿನಾದ್ಯಂತ ಸಂಚರಿಸಲಿದೆ. ಈ ರೀತಿಯ ಅಭಿಯಾನದ ಮೂಲಕ ಬೆಂಗಳೂರಲ್ಲಿರುವ ಅನ್ಯ ಭಾಷೆಯ ಜನರಿಗೂ ಕನ್ನಡ ಲಿಪಿ, ಕನ್ನಡ ಸಂಸ್ಕೃತಿಯ ಅರಿವು ಮೂಡಿಸಲಿದೆ.
ಕನ್ನಡ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕನ್ನಡ ಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷರಾದ, ಟಿ.ಎಸ್ ನಾಗಾಭರಣ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಆದರೆ, ಕನ್ನಡೇತರರೂ ಇಲ್ಲಿದ್ದಾರೆ. ನಗರಕ್ಕೆ ವಿಶಿಷ್ಟ ಪರಂಪರೆ ಇದೆ. ಒಗ್ಗೂಡಿ ಬೆಳೆಯುವಾಗ ಎಲ್ಲರನ್ನು ಭಾಷೆ ಒಗ್ಗೂಡಿಸಬೇಕು. ಅದಕ್ಕಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಶುದ್ಧ ಕನ್ನಡ ನಾಮಫಲಕ ಅಭಿಯಾನ ಹಮ್ಮಿಕೊಂಡಿದ್ದೇವೆ. ಇದು ಅಂಗಡಿ ಮುಂಗಟ್ಟು, ನಾಮಫಲಕಕ್ಕೆ ಸೀಮಿತ ಅಲ್ಲ. ಅಕ್ಷರದಾಸೋಹವೂ ನಡೆಯಬೇಕಿದೆ. ಮುಖ್ಯಮಂತ್ರಿಗಳು ಈ ವರ್ಷವನ್ನು ಕನ್ನಡ ಕಾಯಕ ವರ್ಷ ಎಂದು ಘೋಷಿಸಿದ್ದು, ಅದರ ಭಾಗವಾಗಿ ಈ ಅಭಿಯಾನ ನಡೆಯುತ್ತಿದೆ ಎಂದರು.