ಪುಣೆ: ಜಗತ್ತಿನ ಅತೀದೊಡ್ಡ ಲಸಿಕ ತಯಾರಿಕೆ ಸಂಸ್ಥೆಯಾಗಿರುವ ಹಾಗೂ ಕೊರೋನಾ ವೈರಸ್’ಗೆ ದೊಡ್ಡ ಪ್ರಮಾಣದಲ್ಲಿ ಕೋವಿಶೀಲ್ಡ್ ಲಸಿಕೆ ತಯಾರಿಸುವ ಮೂಲಕ ಜಗತ್ತಿನ ಗಮನ ಸೆಳೆದಿರುವ ಮಹಾರಾಷ್ಟ್ರದ ಪುಣೆಯಲ್ಲಿನ ಸೀರಮ್ ಕಂಪನಿಯಲ್ಲಿ ಗುರುವಾರ ಸಂಭವಿಸಿದ ಭಾರೀ ಅಗ್ನಿ ಅವಘಡದಿಂದ ರೂ.1 ಕೋಟಿ ನಷ್ಟ ಎದುರಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಗುರುವಾರ ನಿರ್ಮಾಣ ಹಂತದ 5 ಮಹಡಿಯ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 5 ಕಟ್ಟಡ ಕಾರ್ಮಿಕರು ಮೃತಪಟ್ಟಿದ್ದರು. ಅದೃಷ್ಟವಶಾತ್ ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ 9 ಮಂದಿಯನ್ನು ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಯಶಸ್ವಿಯಾಗುವುದರೊಂದಿಗೆ ಸಾವಿನ ಪ್ರಮಾಣ ತಗ್ಗುವಂತೆ ಮಾಡಿದ್ದರು. ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.
ಘಟನೆಗೆ ತೀವ್ರ ಖೇದ ವ್ಯಕ್ತಪ್ಡಿಸಿರುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಲಸಿಕೆಯ ಉತ್ಪಾದನೆ ಹಾಗೂ ಪೂರೈಕೆಯ ತನ್ನ ವಾಗ್ದಾನವನ್ನು ಮುಂದುವರೆಸುವುದಾಗಿ ಸ್ಪಷ್ಟಪಡಿಸಿದೆ.
ಅಲ್ಲದೆ, ಅಗ್ನಿ ಅವಘದಿಂದ ಉಂಟಾಗಿರುವ ನಷ್ಟದ ಕುರಿತು ಮಾತನಾಡಿರುವ ಸಂಸ್ಥೆಯು, ಘಟನೆಯಲ್ಲಿ ಸಂಸ್ಥೆಗೆ ರೂ.1 ಸಾವಿರ ಕೋಟಿಗಿಂತಲೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಹೇಳಿದೆ. ಲಸಿಕೆ ತಯಾರಿಕೆ ಹಾಗೂ ಸಂಗ್ರಹಣಾ ಘಟಕಗಳು ಸುರಕ್ಷಿತವಾಗಿರುವುದು ನೆಮ್ಮದಿಯ ಸಂಗತಿ ಎಂದು ತಿಳಿಸಿದೆ.
ಅಗ್ನಿ ಅವಘಡದಿಂದಾಗಿ ಭಾರೀ ನಷ್ಟ ಎದುರಿಸಬೇಕಾಗಿ ಬಂದಿದ್ದು, ಭವಿಷ್ಯದಲ್ಲಿ ಬಿಸಿಜಿ ಮತ್ತು ರೋಟಾ ಲಸಿಕೆಗಳ ಉತ್ಪಾದನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳೂ ಇವೆ ಎಂದು ಸಂಸ್ಥೆ ಶಂಕೆ ವ್ಯಕ್ತಪಡಿಸಿದೆ.
ಆದರೆ, ಯಾವುದೇ ಕಾರಣಕ್ಕೂ ಕೊರೋನಾ ಲಸಿಕೆ ಉತ್ಪಾದನೆಯ ವಾಗ್ದಾನದಿಂದ ಸಂಸ್ಥೆ ಹಿಂದೆ ಸರಿಯುವುದಿಲ್ಲ ಎಂದು ಸಂಸ್ಥೆಯ ಸಿಇಒ ಆದಾರ್ ಪೂನಾವಾಲಾ ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನು ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ತನಿಖಾ ವರದಿ ಬಂದ ಬಳಿಕವೇ ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚಿಂತನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ತನಿಖೆ ನಡೆಯುತ್ತಿದ್ದು, ವರದಿ ಬಂದ ಬಳಿಕಷ್ಟೇ ಈ ಕುರಿತು ಪ್ರತಿಕ್ರಿಯೆ ನೀಡುವುದಾಗಿ ಉದ್ಧವ್ ಠಾಕ್ರೆ ನುಡಿದಿದ್ದಾರೆ. ಅಲ್ಲದೇ ತನಿಖಾ ವರದಿ ಶೀಘ್ರವೇ ಬರಲಿದೆ ಎಂಬ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
Laxmi News 24×7