ಧಾರವಾಡದ ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ವೈದ್ಯೆ ಸೇರಿ ಪ್ರತಿಷ್ಠಿತ ಕುಟುಂಬಗಳ ಮಹಿಳೆಯರು ಮೃತಪಟ್ಟ ಸುದ್ದಿ ದಾವಣಗೆರೆಯ ಮಂದಿಗೆ ಬರಸಿಡಿಲಿನಂತೆ ಎರಗಿತು.
ಅಪಘಾತದಲ್ಲಿ ಹೇಮಲತಾ ಹಾಗೂ ಅವರ ಪುತ್ರಿ ಕ್ಷೀರಾ ಉರ್ಫ್ ಅಸ್ಮಿತಾ ಮೃತಪಟ್ಟಿದ್ದಾರೆ. ಕಿಮ್ಸ್ನಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರು ಶವ ತೆಗೆದುಕೊಂಡು ಹೋಗುವಾಗ ಪರಂಜ್ಯೋತಿ ಕಡೆಯವರು ಗೊಂದಲದಿಂದ ಅಸ್ಮಿತಾ ಶವ ಒಯ್ದಿದ್ದರು. ಅಸ್ಮಿತಾಳ ಶವಕ್ಕಾಗಿ ಕಾಯುತ್ತಿದ್ದ ವರು ಆಕೆಯ ಕೈಮೇಲೆ ನಾಯಿಮರಿ ಟ್ಯಾಟೂ ಇಲ್ಲದ್ದನ್ನು ಕಂಡು ಇದು ನಮ್ಮದಲ್ಲ ಎಂದಿದ್ದರು. ಪೊಲೀಸರು ಕೂಡಲೇ ಪರಂಜ್ಯೋತಿ ಕಡೆಯವರಿಗೆ ಕರೆ ಮಾಡಿ, ನೀವು ಒಯ್ದ ಶವದ ಕೈಮೇಲೆ ನಾಯಿಮರಿ ಟ್ಯಾಟೂ ಇದೆಯಾ ಎಂದು ಕೇಳಿದಾಗ, ಅವರು ಇದೆ ಎಂದಿದ್ದರು. ಬಂಕಾಪುರ ಬಳಿ ಹೊರಟಿದ್ದ ಅವರನ್ನು ತಡೆದು ಅಸ್ಮಿತಾ ಶವ ವಾರಸುದಾರರಿಗೆ ಒಪ್ಪಿಸಿದ್ದಾರೆ.
ಘಟನೆ ಹಿನ್ನೆಲೆ
ಅವರೆಲ್ಲ ನಗರದ ಸೇಂಟ್ ಪಾಲ್ಸ್ ಕಾನ್ವೆಂಟ್ ಶಾಲೆಯ ಹಳೆಯ ವಿದ್ಯಾರ್ಥಿಗಳು. 1989ರ ಸಾಲಿನ ವಿದ್ಯಾರ್ಥಿಗಳು. ವೈದ್ಯಕೀಯ, ಸಮಾಜಸೇವೆ ಇನ್ನಿತರ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು. ಗೃಹಿಣಿಯರಾಗಿ ಕುಟುಂಬದ ಜವಾಬ್ದಾರಿ ಹೊತ್ತವರು. ಆಗಾಗ ಒಟ್ಟಿಗೆ ಸೇರಿ ಪ್ರವಾಸ ಹೊರಡುವ ಪರಿಪಾಠ ಬೆಳೆಸಿಕೊಂಡಿದ್ದರು. ಗೋವಾ ಪ್ರವಾಸ ಹಮ್ಮಿಕೊಳ್ಳುವ ಬಗ್ಗೆ ಕೆಲ ಗೆಳತಿಯರು ಸೇರಿಕೊಂಡು ಇತ್ತೀಚೆಗೆ ಚರ್ಚಿಸಿದ್ದರು.
ಅದರಂತೆ ಗೋವಾ ಪ್ರವಾಸ ನಿಗದಿಯಾಯಿತು. ಮೊದಲು 7 ಸೀಟುಗಳ ಕಾರಿನಲ್ಲಿ ಹೊರಡಲು ತಯಾರಿ ನಡೆದಿತ್ತು. ಈ ವಿಷಯ ಕೇಳಿ ಇತರ ಗೆಳತಿಯರು ತಾವೂ ಬರುವುದಾಗಿ ತಿಳಿಸಿದ್ದರಿಂದ ಮಿನಿ ಬಸ್ ವ್ಯವಸ್ಥೆ ಮಾಡಲಾಯಿತು.
ಒಟ್ಟು 14 ಮಂದಿ ಸ್ನೇಹಿತೆಯರು ರಾತ್ರಿ 2.30 ರಿಂದ 3 ಗಂಟೆಯ ಸುಮಾರು ದಾವಣಗೆರೆಯಿಂದ ಹೊರಟರು. ಧಾರವಾಡ ಬಳಿಯ ಫಾಮರ್್ಹೌಸ್ನಲ್ಲಿ ತಿಂಡಿ ತಿನ್ನಲು ಏರ್ಪಾಡಾಗಿತ್ತು, ಅಲ್ಲಿಗೆ ಬೆಳಗಾವಿಯಿಂದ ಮೂವರು ಗೆಳತಿಯರು ಬಂದು ಜತೆಗೂಡುವವರಿದ್ದರು. ಅದಕ್ಕೂ ಮುನ್ನ ಧಾರವಾಡ ಹತ್ತಿರದಲ್ಲೇ ಈ ದುರ್ಘಟನೆ ನಡೆದುಹೋಯಿತು. ಮಿನಿ ಬಸ್ಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿ 13 ಮಂದಿ ದುರಂತ ಸಾವಿಗೀಡಾದರು.