Breaking News
Home / ರಾಜ್ಯ / ಕುರುಬ ಸಮುದಾಯ ಜನರು ಜಾಗೃತರಾಗಿ ಹೋರಾಟ ನಡೆಸಿದಾಗ ಮಾತ್ರ ಎಸ್‌ಟಿ ಮೀಸಲಾತಿ ಕುರುಬ ಜನಾಂಗಕ್ಕೆ ದೊರೆಯುತ್ತದೆ

ಕುರುಬ ಸಮುದಾಯ ಜನರು ಜಾಗೃತರಾಗಿ ಹೋರಾಟ ನಡೆಸಿದಾಗ ಮಾತ್ರ ಎಸ್‌ಟಿ ಮೀಸಲಾತಿ ಕುರುಬ ಜನಾಂಗಕ್ಕೆ ದೊರೆಯುತ್ತದೆ

Spread the love

ಶಿಕಾರಿಪುರ: ಕುರುಬ ಸಮುದಾಯ ಜನರು ಜಾಗೃತರಾಗಿ ಹೋರಾಟ ನಡೆಸಿದಾಗ ಮಾತ್ರ ಎಸ್‌ಟಿ ಮೀಸಲಾತಿ ಕುರುಬ ಜನಾಂಗಕ್ಕೆ ದೊರೆಯುತ್ತದೆ ಎಂದು ಕಾಗಿನೆಲೆ ಕನಕ ಗುರುಪೀಠದ ಪೀಠಾಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ ಸಲಹೆ ನೀಡಿದರು.

ಪಟ್ಟಣದ ಹೊಸಸಂತೆ ಮೈದಾನದಲ್ಲಿ ಗುರುವಾರ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠ, ಕುರುಬರ ಎಸ್‌ಟಿ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘ ಕುರುಬ ಸಮುದಾಯದ ಎಸ್‌ಟಿ ಮೀಸಲಾತಿಗೆ ಒತ್ತಾಯಿಸಿ ಆಯೋಜಿಸಿದ್ದ ಶಿವಮೊಗ್ಗ-ಚಿಕ್ಕಮಗಳೂರು ವಿಭಾಗ ಮಟ್ಟದ ಬೃಹತ್ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕುರುಬ ಸಮುದಾಯದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ ಹಾಗೂ ಕಟ್ಟ ಕಡೆಯ ಕುರುಬನ ಭವಿಷ್ಯಕ್ಕಾಗಿ ಎಸ್‌ಟಿ ಮೀಸಲಾತಿ ಹೋರಾಟ ಆರಂಭಿಸಿದ್ದೇವೆ. ಹೋರಾಟದಿಂದ ಮಾತ್ರ ಹಕ್ಕು ಪಡೆಯಲು ಸಾಧ್ಯವಾಗುತ್ತದೆ. ಜನವರಿ 15ರಿಂದ ಆರಂಭವಾಗುವ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಪಾದಯಾತ್ರೆಗೆ ಮಾತ್ರ ಹೋರಾಟ ನಿಲ್ಲುವುದಿಲ್ಲ. ಮೀಸಲಾತಿ ಪಡೆಯಲು ಸಂಸತ್ತಿನ ಮುಂದೆ ಉಪವಾಸ ಕೂರುತ್ತೇನೆ’ ಎಂದರು.

ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ‘ನಮ್ಮ ಸಮುದಾಯ ಮೀಸಲಾತಿ ಸೌಲಭ್ಯದಿಂದ ವಂಚಿತವಾಗಿದ್ದು, ಉತ್ತರ ಕರ್ನಾಟಕದಲ್ಲಿ ಜನರು ಶೋಚನೀಯ ಸ್ಥಿತಿಯಲ್ಲಿದ್ದಾರೆ. ರಾಜಕೀಯ ಪಕ್ಷಗಳು ಕೇವಲ ಓಟು ಪಡೆಯಲು ಮಾತ್ರ ಕುರುಬರನ್ನು ಬಳಸಿಕೊಳ್ಳತ್ತಿವೆ. ಆದರೆ, ನಮ್ಮ ಸಮುದಾಯಕ್ಕೆ ಅನ್ಯಾಯವಾದಾಗ ನಮ್ಮ ಪರ ಓಟು ಪಡೆದುಕೊಳ್ಳುವ ನಾಯಕರು ನಿಲ್ಲಬೇಕು. ಈ ಸಮಾವೇಶ ಯಾವ ಪಕ್ಷದ ಹಾಗೂ ವ್ಯಕ್ತಿಯ ಪರವಾದ ಸಮಾವೇಶ ಅಲ್ಲ. ಕುರುಬರಿಗೆ ಅನ್ಯಾಯವಾಗಿರುವುದನ್ನು ಹೇಳುವ ಸಮಾವೇಶವಾಗಿದೆ’ ಎಂದರು.

ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ‘ಕುರುಬ ಸಮುದಾಯ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಕಾಗಿನೆಲೆಶ್ರೀಗಳು ಹಾಗೂ ಹೊಸದುರ್ಗ ಶಾಖಾಶ್ರೀಗಳು ಆರಂಭಿಸಿರುವ ಹೋರಾಟಕ್ಕೆ ನಾನು ಬೆಂಬಲ ನೀಡುತ್ತಿದ್ದೇನೆ. ಕುರುಬ ಸಮುದಾಯ ಬೆಂಬಲ ನೀಡಬೇಕು. ಹೋರಾಟಕ್ಕೆ ಬೆಂಬಲ ನೀಡುವಂತೆ ಸ್ವಾಮೀಜಿ ಅವರು ನಮ್ಮ ಮನೆಗೆ ಬರುವ ಮುಂಚೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಗೆ ತೆರಳಿ ಬೆಂಬಲ ಕೋರಿದ್ದರು. ಈ ಬಗ್ಗೆ ಯಾರಿಗೂ ಗೊಂದಲ ಬೇಡ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕುರುಬರ ಎಸ್‌ಟಿ ಹೋರಾಟ ಸಮಿತಿ ಖಜಾಂಚಿ ಕೆ.ಇ. ಕಾಂತೇಶ್, ‘ಎಸ್‌ಟಿ ಮೀಸಲಾತಿಗಾಗಿ ಅನೇಕ ವರ್ಷಗಳ ಹಿಂದೆ ನಮ್ಮ ಸಮಾಜದ ಮುಖಂಡರು ಹೋರಾಟ ಮಾಡಿದ್ದಾರೆ. ಪ್ರಸ್ತುತ ಕಾಗಿನೆಲೆಶ್ರೀಗಳು ಹೋರಾಟದ ನೇತೃತ್ವ ವಹಿಸಿದ್ದು, ಜನವರಿ 15ರಂದು ಕಾಗಿನೆಲೆಯಿಂದ ಬೆಂಗಳೂರಿಗೆ ಆಯೋಜಿಸಿರುವ ಪಾದಯಾತ್ರೆಯಲ್ಲಿ ಪಾಲ್ಗೊಂಡು ಪಾದಯಾತ್ರೆ ಯಶಸ್ವಿಗೊಳಿಸಬೇಕು. ರಾಜ್ಯದ ಪವರ್ ಸೆಂಟರ್ ಶಿಕಾರಿಪುರ. ನಮ್ಮ ಕೂಗು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೇಳಬೇಕು. ಎಸ್‌ಟಿ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿ ಅವರು ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದು ಒತ್ತಾಯಿಸಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ