ಬೆಳಗಾವಿ – ಇಲ್ಲಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪ್ರತಿಭಾವಂತ ಗೋಲ್ಡ್ ಮೆಡಲಿಸ್ಟ್ ಗಳಿಗೆ ಗೋಲ್ಡ್ ಮೆಡಲ್ ಗಳನ್ನು ನೀಡಿ ಗೌರವಿಸದೆ ವಿದ್ಯಾರ್ಥಿಗಳನ್ನು ತಿರಸ್ಕರಿಸಿ ಅವಮಾನಿಸಿದೆ ಎಂದು ಶಾಸಕರೂ, ಕೆಪಿಸಿಸಿ ರಾಜ್ಯ ವಕ್ತಾರರೂ ಆಗಿರುವ ಲಕ್ಷ್ಮಿ ಹೆಬ್ಬಾಳಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಜರುಗಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಎಂಟನೇಯ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಬೆಳಗಾವಿ ನಗರದ ನಿವಾಸಿ ಸೃಷ್ಟಿ ಗ್ಯಾನಿ ಎಂಬ ವಿದ್ಯಾರ್ಥಿನಿಯು ಇದೇ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗವನ್ನು ಮಾಡಿದ್ದು, ಕ್ರಿಮಿನಾಲಜಿ ಕ್ರಿಮಿನಲ್ ಜಸ್ಟಿಸ್ ವಿಭಾಗದಲ್ಲಿ ಗೋಲ್ಡ್ ಮೆಡಲ್ ನ್ನು ತಗೆದುಕೊಂಡಿದ್ದಳು. ಇದೇ ರೀತಿ 22ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಯಾ ವಿಭಾಗದಲ್ಲಿ ಗೋಲ್ಡ್ ಮೆಡಲ್ ಗಳಿಗೆ ಅರ್ಹತೆಯನ್ನು ಪಡೆದಿದ್ದರೂ ಕೂಡ ಯಾವುದನ್ನು ಪರಿಗಣಿಸದೇ ಹಾಗೂ ಗೋಲ್ಡ್ ಮೆಡಲ್ ಗಳನ್ನು ನೀಡದೇ ವಿಶ್ವವಿದ್ಯಾಲಯ ತಿರಸ್ಕರಿಸಿ ಅವಮಾನಿಸಿದೆ ಎಂದು ಹೆಬ್ಬಾಳಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿದ್ಯಾರ್ಥಿನಿ ಹಾಗೂ ಅವಳ ತಂದೆ ನನ್ನನ್ನು ಭೇಟಿ ಮಾಡಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡು ತಮಗಾದ ನೋವನ್ನು ವ್ಯಕ್ತಪಡಿಸಿದರು. ಸಮಾಧಾನಕರ ಬಹುಮಾನ ಎನ್ನುವ ಹಾಗೇ ಪ್ರತಿಯೊಬ್ಬ ಗೋಲ್ಡ್ ಮೆಡಲಿಸ್ಟ್ ಗಳಿಗೆ 1070 ರೂ. ಡಿಡಿ ನೀಡಿ ನಿರಾಸೆಗೊಳಿಸಲಾಗಿದೆ. ಇದು ಪ್ರತಿಭೆಗಳಿಗೆ ಮಾಡಲಾದ ಅವಮಾನವಾಗಿದೆ ಎಂದು ಅವರು ಹೇಳಿದ್ದಾರೆ.

ವಿದ್ಯಾರ್ಥಿನಿಯ ಸಾಧನೆಗೆ ಅಭಿನಂದನೆಯನ್ನು ಸಲ್ಲಿಸಿ ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭ ಕೋರಿದ್ದೇನೆ ಎಂದೂ ಹೆಬ್ಬಾಳಕರ್ ತಿಳಿಸಿದ್ದಾರೆ.