ನವದೆಹಲಿ – ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೂ ಕೊರೋನಾ ಪಾಸಿಟಿವ್ ಬಂದಿದೆ.
ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ. ನಿನ್ನೆಯಷ್ಟೆ ಬೆಳಗಾವಿಯಿಂದ ದೆಹಲಿಗೆ ತೆರಳಿರುವ ಅವರು ಅಲ್ಲಿ ಪರೀಕ್ಷೆಗೆ ಒಳಪಟ್ಟಿದ್ದಾರೆ. ರೋಗ ಲಕ್ಷಣಗಳಿಲ್ಲದಿದ್ದರೂ ಪಾಸಿಟಿವ್ ಕಾಣಿಸಿಕೊಂಡಿದ್ದು, ವೈದ್ಯರ ಸಲಹೆ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರು ಪರೀಕ್ಷೆಗೆ ಒಳಪಡುವಂತೆ ಅವರು ವಿನಂತಿಸಿದ್ದಾರೆ.
ಸುರೇಶ ಅಂಗಡಿ ಬೆಳಗಾವಿಯಲ್ಲಿ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದರು. ಅಲ್ಲದೆ ಅವರು ಬೆಳಗಾವಿ – ಧಾರವಾಡ ನೇರ ರೈಲ್ವೆ ಲೈನ್ ಗೆ ಮಂಜೂರು ಪಡೆದಿರುವುದರಿಂದ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ನಿನ್ನೆ ಕೂಡ ಅವರನ್ನು ಸನ್ಮಾನಿಸಿದ್ದಾರೆ. ಹಾಗಾಗಿ ಅನೇಕರಿಗೆ ಈಗ ಆತಂಕ ಶುರುವಾಗಿದೆ.