ಮಳವಳ್ಳಿ, ಆ.31- ದೇಶದಾದ್ಯಂತ ಮಹಾಮಾರಿಯಾಗಿ ಜನರ ಜೀವನವನ್ನೆ ತಲ್ಲಣವಾಗಿಸಿದ ಕರೋನ ಹೊಡೆತಕ್ಕೆ ದಾಸನದೊಡ್ಡಿ ಗ್ರಾಮದ ಬಸವಶ್ರೀ ಪುರಸ್ಕøತ ಆಧುನಿಕ ಭಗೀರಥ ಕಲ್ಮನೆ ಕಾಮೆಗೌಡರಿಗೆ ಅತಿ ಹೆಚ್ಚು ಪರಿಣಾಮ ಬೀರಿದೆ. ಘಟನೆ: 16 ಕಟ್ಟೆಗಳನ್ನು ನಿರ್ಮಿಸಿ ಅಂತರ್ಜಲವೃದ್ದಿಯಲ್ಲಿ ದೇಶದ ಗಮನ ಸೆಳೆದಿರುವ ಕಲ್ಮನೆ ಕಾಮೆಗೌಡರನ್ನು ಪ್ರದಾನಿ ಮೋದಿಯವರ ಪ್ರಶಂಸೆಯ ನಂತರ ಅತಿ ಹೆಚ್ಚಿನ ಅಭಿಮಾನಿಗಳು ಅಗಮಿಸಿ ಕಾಮೆಗೌಡರ ಕಟ್ಟೆಗಳನ್ನು ನೋಡಿ ಸಂತಸ ಪಟ್ಟು ಗೌಡರನ್ನು ಅಭಿನಂಧಿಸಿ ಹೋಗುತ್ತಿದ್ದರು.
ಈ ಸಂದರ್ಭದಲ್ಲಿ ತಮ್ಮ ಅರೋಗ್ಯದ ಬಗ್ಗೆ ಗಮನಹರಿಸದ ಕಾಮೆಗೌಡರಿಗೆ ಹಳೆಗಾಯ ತೀವ್ರತರ ಗಾಯವಾಗಿ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಆಗಲೇ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಚಿಕಿತ್ಸೆ ಪಡೆದಿದ್ದರು. ಅಸ್ಪತ್ರೆಯಿಂದ ಕರೋನ ಗೆದ್ದು ಬಂದರೂ ತಮ್ಮ ಆರೋಗ್ಯಕ್ಕಿಂತ ಮಕ್ಕಳ ಹಾಗೂ ಮೊಮ್ಮಕ್ಕಳ ಅರೋಗ್ಯಕ್ಕೆ ತೊಂದರೆಯಾಗಬಾರದು ಎಂದು ಮನೆಯ ಹಿತ್ತಲಿನಲ್ಲಿ ಜೀವನ ಸಾಗಿಸುತ್ತಿರುವುದನ್ನು ನೋಡಿದರೆ ಅವರು ಕರೋನಕ್ಕೆ ಎಷ್ಟೊಂದು ಅತಂಕ ಗೊಂಡಿದ್ದಾರೆಂದು ತಿಳಿಯುತ್ತದೆ.
ಮನೆಯ ಪಡಸಾಲೆಯಲ್ಲೂ ವಾಸ ಮಾಡದೆ ಮನೆಯ ಹಿಂಬದಿಯಲ್ಲಿರುವ ಪಾಳು ಹಿತ್ತಲಿನಲ್ಲಿ ಒಂದು ಟಾರ್ಪಾಲು ಕಟ್ಟಿಕೊಂಡು, ಅಲ್ಲೇ ಒಂದು ಮಂಚ ಹಾಕಿಕೊಂಡು ಜೀವನ ಸಾಗಿಸುತ್ತಿರುವುದನ್ನು ಮನ ಕಲಕುತ್ತದೆ. ಗ್ರಾಮದ ಕೆಲವರು ಎಷ್ಟೆ ಆರೋಪ ಮಾಡಿದರೂ ಚಿಂತಿಸದೆ ಸದಾ ಕಾಯಕದ ಚಿಂತನೆಯಲ್ಲಿರುತ್ತಿದ್ದ ಕಾಮೆಗೌಡರ ಆರೋಗ್ಯ ಮತ್ತು ಜೀವನದ ಬಗ್ಗೆ ಜಿಲ್ಲಾಢಳಿತ ವಿಶೇಷ ಗಮನ ಹರಿಸಬೇಕಿದೆ.
ಕಾಯಕದ ತುಡಿತ:ಬಲಗಾಲಿನ ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದರೂ ಸಹ ಕಾಮೆಗೌಡರು ನೆನೆಗುದಿಗೆ ಬಿದ್ದಿರುವ ಕಟ್ಟೆಗಳ ಕೆಲಸ ಮಾಡಬೇಕು ಎನ್ನುವ ತವಕದಲ್ಲಿದ್ದಾರೆ.ಇದಲ್ಲದೆ ಅವರು ಕಟ್ಟೆಗಳ ಪಕ್ಕದಲ್ಲಿ ನೆಟ್ಟಿದ್ದ ನೂರಾರು ಆಲದ ಮರಗಳನ್ನು ಉದ್ದೇಶ ಪೂರ್ವಕವಾಗಿ ಕಿಡಿಗೇಡಿಗಳು ಹಾಳು ಮಾಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ನಾನು ಕೆರೆ ಕಟ್ಟೆಗಳನ್ನು ಮಾಡಿರುವುದು ಜನರಿಗಲ್ಲ, ಕೇವಲ ಕಾಡು ಪ್ರಾಣಿ- ಪಕ್ಷಿಗಳ ದಾಹ ತಣಿಸಲಿಕ್ಕೆ ಯಾವುದೇ ಪ್ರಶಸ್ತಿ ಅಥವಾ ಪುರಸ್ಕಾರ ಬರಲಿ ಎಂದು ಮಾಡಲಿಲ್ಲವೆಂದು ಅವರು ಖಡಕ್ಕಾಗಿ ಉತ್ತರಿಸಿದ್ದಾರೆ.
ನನಗೆ ಬಂದ ಪುರಸ್ಕಾರಗಳನ್ನು ಕಟ್ಟೆಗಳನ್ನು ನಿರ್ಮಿಸಲು ಬಳಸಿಕೊಂಡಿದ್ದೇನೆ. ಯಾವುದೇ ಸ್ವಾರ್ಥಕ್ಕೆ ಮಾಡಿಕೊಂಡಿಲ್ಲ. ನನ್ನ ಕಾಯಕದ ಸಾಕ್ಷಿಗುಡ್ಡೆಗಳು ಕುಂದೂರು ಬೆಟ್ಟದ ತಳಹದಿಯಲ್ಲಿ ಶಾಶ್ವತವಾಗಿವೆ. ಅನುಮಾನಿಸುವ ಹಾಗೂ ಸಂದೇಹಪಡುವವರು ಬಂದು ನೋಡಲಿ ಸತ್ಯ ಏನೆಂದು ತಿಳಿಯಲಿದೆ ಎಂದು ಕಿಡಿಗೇಡಿಗಳ ಅರೋಪಕ್ಕೆ ತಿರುಗೇಟು ನೀಡಿದ್ದಾರೆ.