ಚಿಕ್ಕೋಡಿ:ಭಾರತೀಯ ಜನತಾ ಪಾರ್ಟಿ ಚಿಕ್ಕೋಡಿ ಜಿಲ್ಲೆಯ ವತಿಯಿಂದ ಇಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ತಿರಂಗಾ ಯಾತ್ರೆ ವೈಭವಯುತವಾಗಿ ಹಾಗೂ ಯಶಸ್ವಿಯಾಗಿ ನೆರವೇರಿತು.
ಆರ್.ಡಿ. ಹೈಸ್ಕೂಲ್ ಮೈದಾನದಲ್ಲಿ ಸ್ಥಳೀಯ ಸಂಪಾದನಾ ಚರಮೂರ್ತಿ ಮಠದ ಶ್ರೀ ಸಂಪಾದನಾ ಸ್ವಾಮೀಜಿಯವರು ತಾಯಿ ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ‘ಅಖಂಡ ವಂದೇ ಮಾತರಂ’ ಘೋಷಣೆಯೊಂದಿಗೆ ಯಾತ್ರೆಗೆ ಚಾಲನೆ ನೀಡಿದರು. ಸಾವಿರಾರು ವಿದ್ಯಾರ್ಥಿಗಳು ಒಗ್ಗೂಡಿ ರಾಷ್ಟ್ರಗೀತೆ ಗಾಯನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಭವ್ಯ ಆರಂಭ ಸಿಕ್ಕಿತು.
ಈ ಯಾತ್ರೆಯ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದದ್ದು ಸುಮಾರು 1000 ಅಡಿ ಉದ್ದದ ಬೃಹತ್ ತಿರಂಗಾ ಧ್ವಜ. ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಸಿಟಿಇ ಸೋಸೈಟಿ ಸಿ.ಎಲ್.ಇ ಸೋಸೈಟಿ ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳ ಸಾವಿರಾರು ವಿದ್ಯಾರ್ಥಿಗಳು ಹಾಗೂ ಯುವಕರು ಅತ್ಯಂತ ಉತ್ಸಾಹದಿಂದ ತ್ರಿವರ್ಣ ಧ್ವಜವನ್ನು ಹಿಡಿದು ಹೆಜ್ಜೆಯಿಟ್ಟರು.
ಆರ್.ಡಿ. ಹೈಸ್ಕೂಲ್ ಮೈದಾನದಿಂದ ಹೊರಟ ಯಾತ್ರೆಯು ಪ್ರಮುಖ ರಸ್ತೆಗಳಾದ ಬಸ್ ಸ್ಟ್ಯಾಂಡ್, ಕೆ.ಸಿ. ರೋಡ್ ಹಾಗೂ ಪ್ರಭಾಕರ ಕೋರೆ ನಗರದ ಮುಖಾಂತರ ಸಂಚರಿಸಿ, ಮರಳಿ ಆರ್.ಡಿ. ಹೈಸ್ಕೂಲ್ ಮೈದಾನವನ್ನು ತಲುಪಿತು. ಯಾತ್ರೆಯುದ್ದಕ್ಕೂ ಮೊಳಗಿದ ದೇಶಭಕ್ತಿಯ ಘೋಷಣೆಗಳು ನಗರದಲ್ಲಿ ಹಬ್ಬದ ವಾತಾವರಣ ನಿರ್ಮಿಸಿದ್ದವು. ಮೈದಾನಕ್ಕೆ ಮರಳಿದ ಬಳಿಕ ರಾಷ್ಟ್ರಗೀತೆಯೊಂದಿಗೆ ಯಾತ್ರೆಯು ಅಧಿಕೃತವಾಗಿ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮೃತ ಕುಲಕರ್ಣಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ದೇಶಭಕ್ತಿಯ ಜಾಗೃತಿಯ ಅಗತ್ಯತೆಯನ್ನು ಪ್ರತಿಪಾದಿಸಿದರು. ಹಿರಿಯ ಧುರಿಣರಾದ ಅಪ್ಪಾಸಾಹೇಬ ಚೌಗಲಾ ಅವರು ವಂದನಾರ್ಪಣೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ರಮೇಶ ಕಾಳನ್ನವರ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಾಜು ಹರಗನ್ನವರ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಶಕುಂತಲಾ ಡೋಣವಾಡೆ, ಹಿರಿಯ ಧುರಿಣರಾದ ಧನ್ಯಕುಮಾರ ಗುಂಡೆ, ಬಿಜೆಪಿ ಪ್ರಮುಖರಾದ ಮಹೇಶ ಬಾತೆ, ದುಂಡಪ್ಪ ಬೆಂಡವಾಡೆ, ವಿಶ್ವನಾಥ ಕಾಮಗೌಡ, ಮಿಥುಣ ದೇಶಪಾಂಡೆ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸಂಜೀವ ಪಾಟೀಲ ಉಪಸ್ಥಿತರಿದ್ದರು.
ಅಲ್ಲದೆ, ಮಂಡಲ ಅಧ್ಯಕ್ಷರಾದ ಪವಣಕುಮಾರ ಮಹಾಜನ, ಶ್ರೀಶೈಲ ಯಮಕನಮರಡಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ದುರದುಂಡಿ, ಮಂಡಲ ಪ್ರಧಾನ ಕಾರ್ಯದರ್ಶಿ ಸಿದ್ದು ನರಟ್ಟಿ ಸೇರಿದಂತೆ ನಗರದ ವಿವಿಧ ಶಾಲಾ-ಕಾಲೇಜುಗಳ ಶಿಕ್ಷಕರು, ಪ್ರಾಂಶುಪಾಲರು, ನಿವೃತ್ತ ಸೈನಿಕರು, ಮಹಿಳಾ ಸಂಘಗಳ ಸದಸ್ಯರು, ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪಕ್ಷದ ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿ ಯಾತ್ರೆಯನ್ನು ಯಶಸ್ವಿಗೊಳಿಸಿದರು.
Laxmi News 24×7