ಲಿಂಗಾಯತ ಸಂಘಟನೆ ವತಿಯಿಂದ ವಚನ ಸಂಗೀತ ಕಾರ್ಯಕ್ರಮ – ಭಾವನೆಗಳಿಗೆ ಜೀವ ತುಂಬುವ ಶಕ್ತಿ ಸಂಗೀತಕ್ಕಿದೆ -ಗಾನ ವಿದೂಷಿ ಪಾವನಿ ಕಾಶೀನಾಥ
ವಚನಗಳಲ್ಲಿ ಅಡಗಿರುವ ಭಾವನೆಗಳಿಗೆ ಜೀವ ತುಂಬುವ ಶಕ್ತಿ ಸಂಗೀತಕ್ಕಿದೆ ಎಂದು ತೋರಿಸುವುದರ ಜೊತೆಗೆ 12ನೇ ಶತಮಾನದ ಶರಣರ ವಿಶೇಷ ವಚನಗಳನ್ನು ರಾಗ ತಾಳ ಸಂಯೋಜನೆಯೊಂದಿಗೆ ಸಂಗೀತ ರೂಪದಲ್ಲಿ ಪ್ರಸ್ತುತಪಡಿಸಿ ಸರ್ವರನ್ನು ಭಕ್ತಿಯ ಸಾಗರದಲ್ಲಿ ತೇಲುವಂತೆ ಮಾಡಿದ ಸಂಗೀತ ಕಾರ್ಯಕ್ರಮ ಬೆಳಗಾವಿ ನಗರದ ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಸಂಗೀತ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪ್ರಖ್ಯಾತ ಗಾನವಿದೂಷಿ ಪಾವನಿ ಕಾಶೀನಾಥ್ ಬಸವಣ್ಣನವರು, ಅಕ್ಕಮಹಾದೇವಿ ಸೇರಿದಂತೆ ವಿವಿಧ ಶರಣರ ವಚನಗಳಾದ ‘ಎತ್ತೇತ್ತ ನೋಡಿದತ್ತ ಬಸವ’, ‘ಬಸವ ಬಸವ ಎಂದ ಮಜ್ಜನ ಕೇಳಾ’, ‘ಭಕ್ತರಾ ಭಾವದಲ್ಲಿ ಬಸವ’, ‘ತನು ಶುದ್ಧ ಮನ ಶುದ್ಧ ಎನಗೊಮ್ಮೆ ತೋರಾ’, ‘ಅಂಗದ ಕಡಲಲೊಂದು’, ‘ಇವನಾರವ ಇವನಾರವ’, ‘ತನುವೇ ಶಿವಾಲಯ… ವಿವಿಧ ವಚನಗಳನ್ನು ರಾಗಬದ್ಧವಾಗಿ ಹಾಡಿ ನೆರೆದ ಸಭಿಕರನ್ನು ಮಂತ್ರಮುಗ್ದಗೊಳಿಸಿದರು.
ಸಾನಿಧ್ಯ ವಹಿಸಿದ್ದ ಬಸವ ತತ್ವ ಅನುಭಾವ ಕೇಂದ್ರದ ಮಾತೆ ವಾಗ್ದೇವಿ ತಾಯಿಯವರು ಮಾತನಾಡಿ ಬೆಂಗಳೂರಿನ ಗಾನವಿದೂಷಿ ಪಾವನಿ ಕಾಶೀನಾಥ್ ತಮ್ಮ 3ನೇ ವಯಸ್ಸಿನಲ್ಲಿಯೇ ವಚನ ಗಾಯನ ರೂಡಿಸಿಕೊಂಡಿದ್ದು ವಿಶೇಷವಾಗಿ ವಿಜಯಪುರದ ಜ್ಞಾನ ಯೋಗಿ ಸಿದ್ದೇಶ್ವರ ಸ್ವಾಮೀಜಿಯವರ ಅನೇಕ ಕಾರ್ಯಕ್ರಮಗಳಲ್ಲಿ ವಚನ ಗಾಯನ ಪ್ರಸ್ತುತಪಡಿಸಿದ್ದಾರೆ. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಸೇರಿದಂತೆ ಸಂಗೀತದ ಎಲ್ಲಾ ಆಯಾಮಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ದಕ್ಷಿಣ ಭಾರತದಲ್ಲಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡುವುದರ ಜೊತೆಗೆ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿಯವರು ಏರ್ಪಡಿಸಿದ್ದ ವಂದೇ ಮಾತರಂ ಗೀತ ಗಾಯನದ ತಂಡದಲ್ಲೂ ಭಾಗವಹಿಸಿದ್ದು ವಿಶೇಷವಾಗಿದೆ. ಆ ನಿಟ್ಟಿನಲ್ಲಿ ಇಂತಹ ಸಂಗೀತ ಕಾರ್ಯಕ್ರಮಗಳು ಜೀವನ ಶೈಲಿಯ ಬದಲಾವಣೆಗೆ ಸಹಕಾರಿಯಾಗಿದೆ ಎಂದು ಸಂಗೀತ ಕಾರ್ಯಕ್ರಮ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಂಘಟನೆ ವತಿಯಿಂದ ಗಾಯಕಿ ಪಾವನಿ ಮತ್ತು ಅವರ ತಾಯಿ ಪ್ರಸಿದ್ಧ ವೀಣಾ ವಾದಕಿ ಮತ್ತು ಆಕಾಶವಾಣಿ ಕಲಾವಿದೆ ಪುಷ್ಪಾ ರವರನ್ನು ಸತ್ಕರಿಸಲಾಯಿತು. ಸಂಘಟನೆಯ ಅಧ್ಯಕ್ಷ ಈರಣ್ಣ ದೇಯನ್ನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತೆ ಕುಮುದಿನಿತಾಯಿ,
ಶಂಕರ ಗುಡಸ, ಸದಾಶಿವ ದೇವರಮನಿ, ಡಾ ದಾನಮ್ಮ ಜಳಕಿ, ಮಹಾಂತೇಶ ತೋರಣಗಟ್ಟಿ,,ಆನಂದ ಕರ್ಕಿ,, ಬಸವರಾಜ್ ಬಿಜ್ಜರಗಿ. ಸುವರ್ಣ ಗುಡಸ, ಜೆ ಬಿ ಜವಣಿ ,ಶ್ರೀದೇವಿ ನರಗುಂದ,ಎಂ. ವೈ. ಮೆಣಸಿನಕಾಯಿ,ಶಿವಾನಂದ ತಲ್ಲೂರ, ಶಿವಾನಂದ ನಾಯಕ, ಸೇರಿದಂತೆ , ಶರಣ ಶರಣೆಯರು ಉಪಸ್ಥಿತರಿದ್ದರು. ಆರಂಭದಲ್ಲಿ ಮಹಾದೇವಿ ಅರಳಿ ವಚನ ಪ್ರಾರ್ಥನೆ ಮಾಡಿದರು, ಸುರೇಶ ನರಗುಂದ ಸ್ವಾಗತಿಸಿದರು ಸಂಗಮೇಶ ಅರಳಿ ನಿರೂಪಿಸಿದರು ವಚನ ಮಂಗಳದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು
Laxmi News 24×7