ಚಿಕ್ಕೋಡಿ; ತಾಲೂಕಿನ ಕರೋಶಿ ಗ್ರಾಮದಲ್ಲಿ ಬಸ್ಗಳು ನಿಲ್ಲದೆ ಇರುವುದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಮಂಗಳವಾರ ಹುಕ್ಕೇರಿ-ಚಿಕ್ಕೋಡಿ ಮಾರ್ಗದ ಸಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಕರೋಶಿ ಗ್ರಾಮದಿಂದ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಶಾಲೆ ಹಾಗೂ ಕಾಲೇಜಿಗೆಂದು ಚಿಕ್ಕೋಡಿಗೆ ಪ್ರಯಾಣಿಸುತ್ತಾರೆ. ಆದರೆ, ಬೆಳಗ್ಗೆ ಈ ಮಾರ್ಗವಾಗಿ ಸಂಚರಿಸುವ ಬಂಬಲವಾಡ, ಬೆಣ್ಣಿಹಳ್ಳಿ, ಹುಕ್ಕೇರಿ ಹಾಗೂ ಬೆಳಗಾವಿಗೆ ಹೋಗುವ ಬಸ್ಗಳು ನಿಲ್ಲಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ತಡವಾಗಿ ತಲುಪುತ್ತಿದ್ದು, ಪಾಠಗಳಲ್ಲಿ ಹಿಂದುಳಿಯುತ್ತಿದ್ದೆವೆ ಎಂದು ಸಾರಿಗೆ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಳಗ್ಗೆ ೮.೩೦, ೯.೩೦ ಗಂಟೆಗೆ ೨ ಹೆಚ್ಚುವರಿ ಬಸ್ ಸೇವೆ ನೀಡುವುದು ಹಾಗೂ ಕರೋಶಿ ಮಾರ್ಗದಲ್ಲಿ ಹಾದುಹೋಗುವ ಸಾರಿಗೆ ಬಸ್ಗಳನ್ನು ಕಡ್ಡಾಯವಾಗಿ ನಿಲ್ಲಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಚಿಕ್ಕೋಡಿ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
ವಿಜಯ ಕೋಟಿವಾಲೆ,, ಸೋಮೇಶ್ವರ ಹಿರೇಮಠ, ಮಹಾಂತೇಶ ಖೋತ, ಅರುಣ ಬಿದ್ರೆ ಇತರರಿದ್ದರು.
Laxmi News 24×7