ಚಿಕ್ಕಬಳ್ಳಾಪುರ: ಮಹಿಳಾ ನ್ಯಾಯಾಧೀಶರ ಚೇರ್ಗೆ ಮಹಿಳೆಯೊಬ್ಬರು ಮಾಟಮಂತ್ರ ಮಾಡಿರುವ ಅಚ್ಚರಿಯ ಘಟನೆ ಚಿಕ್ಕಬಳ್ಳಾಪುರ ನ್ಯಾಯಾಲಯದಲ್ಲಿ ನಡೆದಿದೆ.
ಸಿವಿಲ್ ವ್ಯಾಜ್ಯದಲ್ಲಿ ತನ್ನ ಪರ ಅನುಕೂಲಕರ ತೀರ್ಪು ಪಡೆಯುವ ಉದ್ದೇಶದಿಂದ ಮಹಿಳಾ ನ್ಯಾಯಾಧೀಶರ ಚೇರ್ಗೆ ಮಾಟಮಂತ್ರ ಮಾಡಿದ್ದ ಚಿಕ್ಕಬಳ್ಳಾಪುರ ನಗರ ಪೊಲೀಸರು ಮಂಜುಳಾ (65) ಎಂಬಾಕೆಯನ್ನ ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ವಲಸಣ್ಣ ಬೀದಿ ನಿವಾಸಿಯಾಗಿರುವ ಮಂಜುಳಾ, 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ನ್ಯಾಯಾಲಯದ (JMFC Court) ನ್ಯಾಯಾಧೀಶರ ಡಯಾಸ್ ಚೇರ್ ಮೇಲೆ ಮಂತ್ರಿಸಿದ ಬಿಳಿ ಸಾಸಿವೆ ಚೆಲ್ಲಿ ಮಾಟಮಂತ್ರ ಮಾಡಿದ್ದರು. ಈ ಕೃತ್ಯ ಎರಡು ದಿನಗಳ ಹಿಂದೆ ನಡೆದಿದ್ದು, ನ್ಯಾಯಾಲಯದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಘಟನೆ ಸಂಬಂಧ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ನೇತ್ರಾ ನೀಡಿದ ದೂರಿನ ಮೇರೆಗೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದು. ಮಂಜುಳಾ ವಿರುದ್ಧ ಕರ್ನಾಟಕ ಅಮಾನವೀಯ ದುಷ್ಟಪದ್ದತಿ ಹಾಗೂ ವಾಮಾಚಾರ ಪ್ರತಿಬಂಧಕ ಮತ್ತು ನಿರ್ಮೂಲನಾ ಅಧಿನಿಯಮ–2017ರಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಬಂಧಿತ ಮಂಜುಳಾಳನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನ್ಯಾಯಾಲಯದ ಆವರಣದಲ್ಲೇ ನಡೆದ ಈ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಮೂಢನಂಬಿಕೆ ಮೂಲಕ ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಪ್ರಯತ್ನದ ಆರೋಪ ಇದೀಗ ಕಾನೂನು ಕ್ರಮಕ್ಕೆ ಕಾರಣವಾಗಿದೆ.
Laxmi News 24×7