ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದ್ದರಿಂದ ಕಳೆದ ಕೆಲವು ದಿನಗಳಿಂದ ಜಲಾವೃತಗೊಂಡಿದ್ದ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಪ್ರಮುಖ 3 ಸೇತುವೆಗಳು ಶನಿವಾರ ಸಂಚಾರಕ್ಕೆ ಮುಕ್ತವಾಗಿವೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕುಸಿದಿರುವುದರಿಂದ ಕೃಷ್ಣಾ ವೇದಗಂಗಾ ಮತ್ತು ದೂಧ್ಗಂಗಾ ನದಿಗಳ ಒಳಹರಿವಿನಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ಚಿಕ್ಕೋಡಿ ಉಪ ವಿಭಾಗದಲ್ಲಿ ಮುಳುಗಡೆಯಾಗಿದ್ದ ಒಟ್ಟು 9 ಕೆಳ ಹಂತದ ಸೇತುವೆಗಳ ಪೈಕಿ 3 ಸೇತುವೆಗಳ ಮೇಲಿಂದ ನೀರು ಇಳಿದಿದ್ದು, ವಾಹನ ಸಂಚಾರ ಪುನಾರಂಭಗೊಂಡಿದೆ. ಆದರೆ ಇನ್ನುಳಿದ 6 ಸೇತುವೆಗಳು ಜಲಾವೃತವಾಗಿಯೇ ಉಳಿದಿದ್ದು, ಯಥಾಸ್ಥಿತಿ ಮುಂದುವರಿದಿದೆ.
ಕೃಷ್ಣಾ ನದಿಯ ನೀರಿನ ಮಟ್ಟ ತಗ್ಗಿದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿರುವ ಐತಿಹಾಸಿಕ ಕುಡಚಿ – ಉಗಾರ ಸೇತುವೆ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಇದು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಗಡಿ ಭಾಗದ ಪ್ರಯಾಣಿಕರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ವೇದಗಂಗಾ ನದಿಯ ಒಳಹರಿವು ಕಡಿಮೆಯಾದ ಕಾರಣ ನಿಪ್ಪಾಣಿ ತಾಲೂಕಿನ ವ್ಯಾಪ್ತಿಗೆ ಬರುವ ಜತ್ತಾಟ – ಭೀವಶಿ ಹಾಗೂ ಬೋಜ – ಕುನ್ನೂರು ಸೇತುವೆಗಳ ಮೇಲಿಂದ ನೀರು ಸಂಪೂರ್ಣವಾಗಿ ಇಳಿದಿದ್ದು, ಈ ಮಾರ್ಗದಲ್ಲೂ ವಾಹನ ಸಂಚಾರ ಎಂದಿನಂತೆ ಆರಂಭವಾಗಿದೆ.
Laxmi News 24×7