ಚಿಕ್ಕಬಳ್ಳಾಪುರ: ಅನುಚಿತ ವರ್ತನೆಯನ್ನು ಪ್ರಶ್ನಿಸಿದ ಕಾಲೇಜು ವಿದ್ಯಾರ್ಥಿನಿಗೆ ಚಾಕುವಿನಿಂದ ಚುಚ್ಚಿದ್ದು ಬಳಿಕ ಗುಂಪೊಂದು ಆಕೆಯ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದೆ.
ಚಿಂತಾಮಣಿ ನಗರದ ಆಶ್ರಯ ಬಡಾವಣೆಯ ಮೇಘನಾ (೧೮). ವಿದ್ಯಾರ್ಥಿನಿಯರಿಗೆ ನೃತ್ಯ ತರಬೇತಿ ನೀಡಿದ ಬಳಿಕ ಮನೆಗೆ ತೆರಳುತ್ತಿದ್ದಾಗ ಕಾರ್ತಿಕ್ ಹಾಗೂ ವಿನೋದ್ ಎಂಬುವರು ಮಾತನಾಡಲು ಮುಂದಾಗಿದ್ದಾರೆ. ಅನುಚಿತವಾಗಿ ವರ್ತಿಸಿದರು ಎನ್ನಲಾಗಿದೆ. ಇದಕ್ಕೆ ಮೇಘನಾ ಅವರನ್ನು ಕೆಳಕ್ಕೆ ತಳ್ಳಿ ಮನೆಗೆ ಓಡಿ ಬಂದಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿಗಳು ೧೦ ಕ್ಕೂ ಹೆಚ್ಚು ಜನರನ್ನು ಕರೆದುಕೊಂಡು ಬಂದು ಮನೆಗೆ ನುಗ್ಗಿದ್ದಾರೆ. ಕಾರ್ತಿಕ್ ಚಾಕುವಿನಿಂದ ಮೇಘನಾ ಅವರ ಹೊಟ್ಟೆ ಹಾಗೂ ಕುತ್ತಿಗೆ ಭಾಗಕ್ಕೆ ಇರಿದಿದ್ದಾನೆ. ವಿನೋದ್ ಕಾಲಿನಿಂದ ಬೆನ್ನಿಗೆ ಒದ್ದಿದ್ದಾನೆ ಎಂದು ಹೇಳಲಾಗಿದೆ. ಬಳಿಕ ಆರೋಪಿಗಳು ಕೂದಲು ಹಾಗೂ ಬಟ್ಟೆ ಹಿಡಿದು ಮನೆ ಹೊರಗೆ ಎಳೆದಾಡಿದ್ದು, ತಡೆಯಲು ಬಂದ ಆಕೆಯ ತಂಗಿಯ ಮೇಲೂ ಹಲ್ಲೆ ನಡೆಸಿದ್ದಾರೆ. ಮನೆಯ ಕಿಟಕಿ ಹಾಗೂ ಬಾಗಿಲುಗಳಿಗೆ ಕಲ್ಲು ತೂರಿ ಗಾಜುಗಳನ್ನು ಪುಡಿಗೈದಿದ್ದಾರೆ. ಗಾಯಗೊಂಡ ಮೇಘನಾರನ್ನು ಚಿಕಿತ್ಸೆಗಾಗಿ ಕೋಲಾರದ ಎಸ್ಎನ್ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಂತಾಮಣಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Laxmi News 24×7