ಕೇವಲ ಸಾಂಪ್ರದಾಯಿಕ ಕ್ಲಾಸ್ರೂಮ್ ಬೋಧನೆಗೆ ಸೀಮಿತವಾಗದೆ ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ; ಪದ್ಮಶ್ರೀ ಡಾ. ಪ್ರಭಾಕರ ಕೋರೆ
ಬೆಳಗಾವಿಯ ಆರ್ಪಿಡಿ ಕಾಲೇಜಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಶಿಕ್ಷಣ ಮತ್ತು ಸಮಾಜ ಸೇವಕ ಪದ್ಮಶ್ರೀ ಡಾ. ಪ್ರಭಾಕರ ಬಸವಪ್ರಭು ಕೋರೆ ಅವರಿಗೆ ದಕ್ಷಿಣ ಕೊಂಕಣ ಶಿಕ್ಷಣ ಸಂಸ್ಥೆಯಿಂದ ಅತ್ಯುನ್ನತ ಗೌರವ ಸಮರ್ಪಣೆ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಕೇವಲ ಸಾಂಪ್ರದಾಯಿಕ ಕ್ಲಾಸ್ರೂಮ್ ಬೋಧನೆಗೆ ಸೀಮಿತವಾಗದೆ ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಬೆಳಗಾವಿಯ ಟಿಳಕವಾಡಿಯಲ್ಲಿರುವ ಆರ್ಪಿಡಿ ಕಾಲೇಜಿನ ಆರ್.ಕೆ. ದೇಸಾಯಿ ಸಭಾಂಗಣದಲ್ಲಿ ಇಂದು ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರಿಗೆ ದಕ್ಷಿಣ ಕೊಂಕಣ ಶಿಕ್ಷಣ ಸಂಸ್ಥೆಯ (SKE) ವತಿಯಿಂದ ಅದ್ಧೂರಿ ಸನ್ಮಾನ ಕಾರ್ಯಕ್ರಮ ಜರುಗಿತು. ಕಾಲೇಜಿನ ಪ್ರಾಚಾರ್ಯರಾದ ಡಾ. ಅಭಯ್ ಪಾಟೀಲ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರೆ, ಎಸ್ಕೆಇ ಸೊಸೈಟಿಯ ಸದಸ್ಯರಾದ ಆನಂದ್ ಸರಾಫ್ ಅವರು ಶ್ಲಾಘನಾ ನುಡಿಗಳನ್ನಾಡಿದರು. ತದನಂತರ ನಡೆದ ಮುಖ್ಯ ಸನ್ಮಾನ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ಕಿರಣ್ ಠಾಕೂರ್ ಅವರು ಡಾ. ಪ್ರಭಾಕರ ಕೋರೆ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಪುಷ್ಪಗುಚ್ಛ ನೀಡಿ ಗೌರವಿಸಿದರು. ಇದೇ ವೇಳೆ ಪ್ರೊ. ಚಾರುಶೀಲಾ ಬಾಳಿಕಾಯಿ ಅವರು ಗೌರವ ಮಾನಪತ್ರವನ್ನು ವಾಚಿಸಿದರು ಮತ್ತು ಕೋರೆ ಅವರ ಜೀವನ ಸಾಧನೆಯ ವಿಶೇಷ ಆಡಿಯೋ-ವಿಷುಯಲ್ ಪ್ರಸ್ತುತಿಯನ್ನು ಪ್ರದರ್ಶಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಪ್ರಭಾಕರ ಕೋರೆ ಅವರು, “ಹಿಂದೆ ಧರ್ಮಾರ್ಥ ಉದ್ದೇಶ ಹೊಂದಿದ್ದ ಶಿಕ್ಷಣ ಸಂಸ್ಥೆಗಳು ಇಂದು ಫ್ಯಾಮಿಲಿ ಟ್ರಸ್ಟ್ಗಳಾಗಿ ಬದಲಾಗುತ್ತಿದ್ದು, ಡೊನೇಷನ್ ಹಾವಳಿಯಿಂದ ವ್ಯವಸ್ಥೆ ಹಾಳಾಗುತ್ತಿದೆ. ಇದರಿಂದ ಶಿಕ್ಷಣ ಸಂಪೂರ್ಣ ಲಾಭದಾಯಕ ವ್ಯವಹಾರವಾಗಲಿದೆ” ಎಂದು ಬೇಸರ ವ್ಯಕ್ತಪಡಿಸಿದರು. ಕೇವಲ ಸಾಂಪ್ರದಾಯಿಕ ಕ್ಲಾಸ್ರೂಮ್ ಬೋಧನೆಗೆ ಸೀಮಿತವಾಗದೆ ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದ ಅವರು, ಇದಕ್ಕಾಗಿ ತಾವು 10 ಕೋಟಿ ರೂ. ವೆಚ್ಚದಲ್ಲಿ ಅಮೇರಿಕನ್ ತಂತ್ರಜ್ಞಾನದ ಸುಧಾರಿತ ಲೈವ್ ಬಾಡಿ ಲ್ಯಾಬ್ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ಪ್ರಾಯೋಗಿಕ ತರಬೇತಿ ನೀಡುತ್ತಿರುವುದನ್ನು ವಿವರಿಸಿದರು. ಹಳೆಯ ಶಿಕ್ಷಣ ಪದ್ಧತಿಗಿಂತ ಸಂಸ್ಕಾರಯುತ ಮತ್ತು ಪ್ರಾಯೋಗಿಕ ಜ್ಞಾನದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ನಂತರ ಸಂಸ್ಥೆಯ ಅಧ್ಯಕ್ಷರಾದ ಡಾ. ಕಿರಣ್ ಠಾಕೂರ್ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.
Laxmi News 24×7