ಮುಂಬೈ: ಸ್ವಯಂಘೋಷಿತ ದೇವಮಾನವನೊಬ್ಬ ನಂಬಿಸಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ತನ್ನ ಮೂತ್ರ ಕುಡಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ನಾನು ದೇವರ ಅವತಾರ ಎಂದು ನಂಬಿಸಿದ್ದ ರಾಧೇಶ್ಯಾಮ್ ಮಿಶ್ರಾ ಅಲಿಯಾಸ್ ರಾಧಾಮೋಹನ್ ಮಿಶ್ರಾ ಹಾಗೂ ಆತನ ಏಳು ಮಂದಿ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ರಾಧೇಶ್ಯಾಮ್ ಮಿಶ್ರಾ ಪುಣೆಯ ವಾಗೋಲಿ ಸಮೀಪದ ಉಬಾಲೆ ನಗರದಲ್ಲಿ ಮಾಡರ್ನ್ ಗುರುಕುಲ ಎಂಬ ಹೆಸರಿನಲ್ಲಿ ಆಶ್ರಮ ನಡೆಸುತ್ತಿದ್ದು, ಕಳೆದ ಹಲವು ವರ್ಷಗಳಿಂದ ಜನರಿಗೆ ವಂಚಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ಆರೋಪಿ ನಡೆಸುತ್ತಿದ್ದ ಆಶ್ರಮಕ್ಕೆ ಮಹಿಳೆ 2010ರಲ್ಲಿ ಭೇಟಿ ನೀಡಿದ್ದಳು. ತನ್ನ ಆರೋಗ್ಯ, ಕುಟುಂಬದ ಆರ್ಥಿಕ ಸಮಸ್ಯೆ ನಿವಾರಣೆಗೆ ಪರಿಹಾರ ಕೇಳಿದ್ದಳು. ಅಲ್ಲಿಂದ ಬರೋಬ್ಬರಿ 15 ವರ್ಷಗಳ ಕಾಲ ಆಕೆಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ನಾನು ದೇವರ ಅವತಾರ ಅಂತ ತನ್ನ ಮೂತ್ರವನ್ನೂ ಕುಡಿಸಿದ್ದಾನೆ. ನೀನು ನನ್ನ ಸೇವೆ ಮಾಡಬೇಕು. ನಿನ್ನ ಗಂಡನಿಗೆ ವಿಚ್ಛೇದನ ಕೊಟ್ಟು ನನ್ನ ಸೇವೆಗೆ ಬಾ ಅಂತ ಟಾರ್ಚರ್ ಕೊಟ್ಟಿದ್ದಾನೆ. ಅಷ್ಟೇ ಅಲ್ಲದೆ, ಕಳ್ಳತನ ಮಾಡುವಂತೆ ಕರೆಂಟ್ ಶಾಕ್ ಕೊಟ್ಟಿದ್ದಾನೆ.
ಆಕೆಯನ್ನು ಕುಟುಂಬದಿಂದ ಪ್ರತ್ಯೇಕಿಸಿ, ಪತಿಗೂ ವಿಚ್ಛೇದನ ಕೊಡಿಸಿ, ಆಕೆಯ ಆಸ್ತಿಯನ್ನೆಲ್ಲಾ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾನೆ. ಅಲ್ಲದೆ, ನಿರಂತರವಾಗಿ ಲೈಂಗಿಕವಾಗಿ ದೌರ್ಜನ್ಯ ಎಸಗಿ, ವಿಡಿಯೋ ಮಾಡಿಕೊಂಡು ಯಾರಿಗೂ ಬಾಯಿಬಿಡದಂತೆ ಬ್ಲ್ಯಾಕ್ಮೇಲ್ ಕೂಡ ಮಾಡಿದ್ದಾನೆ. ನೀನು ಬಾಯಿಬಿಟ್ಟರೆ ನಿನ್ನೆ ಇಡೀ ಕುಟುಂಬದ ವಿರುದ್ಧ ಮಾಟಮಂತ್ರ ಮಾಡಿಸ್ತೇನೆ ಅಂತ ಬೆದರಿಸಿದ್ದಾನೆ. 15 ವರ್ಷಗಳ ನಿರಂತರ ಟಾರ್ಚರ್ ಅನುಭವಿಸಿದರೂ ಕೊನೆಗೆ ಧೈರ್ಯ ಮಾಡಿ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಸಂತ್ರಸ್ತೆ (41) ಮಂಗಳವಾರ ರಾತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಮಿಶ್ರಾ ಆಶ್ರಮದ ಮೇಲೆ ದಾಳಿ ನಡೆಸಿದ್ದು, ಹಲವು ವಸ್ತುಗಳನ್ನ ವಶಪಡಿಸಿಕೊಂಡಿದ್ದರು. ದಾಳಿಯ ವೇಳೆ 12 ಲ್ಯಾಪ್ಟಾಪ್ಗಳು, 11 ಮೊಬೈಲ್ಗಳು, 19 ಹಾರ್ಡ್ ಡ್ರೈವ್ಗಳು, ಪೆನ್ಡ್ರೈವ್ಗಳು ಮತ್ತು ಕ್ಯಾಸೆಟ್ಗಳನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ 6.5 ಲಕ್ಷ ರೂ. ನಗದು, 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಅಪಾರ ಪ್ರಮಾಣದ ಮಾತ್ರೆಗಳು ಮತ್ತು ಮಾದಕ ದ್ರವ್ಯಗಳು ಪತ್ತೆಯಾಗಿವೆ. ಸದ್ಯ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ಸದ್ಯ ವಶಪಡಿಸಿಕೊಳ್ಳಲಾದ ಎಲೆಕ್ಟ್ರಾನಿಕ್ ಸಾಧನಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದೆ.
ಪ್ರಕರಣದಲ್ಲಿ ಮುಖ್ಯ ಆರೋಪಿ ಮಿಶ್ರಾ ಮತ್ತು ಆತನ ಆಪ್ತ ಸಹಚರ ಸ್ವಾಮಿ ಕನ್ವಲ್ ನಯನ್ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದೆ. ಇವರಿಂದ ಇನ್ನು ಹಲವು ಮಹಿಳೆಯರು ಶೋಷಣೆಗೆ ಒಳಗಾಗಿರುವ ಶಂಕೆಯಿದ್ದು, ಹೆಚ್ಚಿನ ಸಂತ್ರಸ್ತರು ದೂರು ನೀಡಲು ಮುಂದೆ ಬರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತ ಎಂಟೂ ಜನ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಶನಿವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
Laxmi News 24×7