ಬೆಂಗಳೂರು: ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬಾಲಕಿ ವೆನ್ನಿಲಾ ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದಡಿ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಅಮಾನತುಗೊಂಡವರಲ್ಲಿ ಕಾಡುಗೋಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಂಗಸ್ವಾಮಿ, ಪಿಎಸ್ಐ ನಿಂಗರಾಜು ಹಾಗೂ ಸಿಬ್ಬಂದಿ ಹಾಲೇಶ್ ನಾಯ್ಕ್ ಸೇರಿದ್ದಾರೆ.
ಇನ್ನು ಪ್ರಿಯಕರನೊಂದಿಗೆ ತನ್ನ ಐದೂವರೆ ವರ್ಷದ ಮಗಳು ವೆನ್ನಿಲಾಳನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರಿಯಾಂಕಾ, ಎಫ್ಐಆರ್ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದಳು. ಆದರೆ, ಇದೀಗ ಪೊಲೀಸರು ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಸನ ಜಿಲ್ಲೆಯ ಸಕಲೇಸಪುರದ ಬಳಿ ಆಕೆಯನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ.
ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದರೂ ಅಧಿಕಾರಿಗಳು ಎಫ್ಐಆರ್ ದಾಖಲಿಸಲು ಎರಡು ತಿಂಗಳು ತಡ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.
ಮಗುವಿನ ತಂದೆಯ ದೂರನ್ನು ಸ್ವೀಕರಿಸದೇ ಪೊಲೀಸರು ನಿರ್ಲಕ್ಷ್ಯ ತೋರಿದ್ದರು. ಆರೋಪಿಗಳ ಮಾಹಿತಿಯ ಆಧಾರದಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಸ್ಥಳ ಪರಿಶೀಲನೆ ಹಾಗೂ ಸಾಕ್ಷ್ಯ ಸಂಗ್ರಹದಲ್ಲಿಯೂ ಪಿಎಸ್ಐ ನಿಂಗರಾಜು ಕರ್ತವ್ಯ ಲೋಪ ಎಸಗಿರುವುದು ಬೆಳಕಿಗೆ ಬಂದಿದೆ.
ಇದೇ ವೇಳೆ ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ಮೇಲ್ವಿಚಾರಣೆ ಮಾಡದಿರುವ ಆರೋಪ ಇನ್ಸ್ಪೆಕ್ಟರ್ ರಂಗಸ್ವಾಮಿ ವಿರುದ್ಧವೂ ಕೇಳಿಬಂದಿದೆ. ಮಹದೇವಪುರ ಉಪ ವಿಭಾಗದ ಎಸಿಪಿ ಸಲ್ಲಿಸಿದ್ದ ವರದಿಯಲ್ಲಿ ಕಾಡುಗೋಡಿ ಪೊಲೀಸರ ಕರ್ತವ್ಯ ಲೋಪದ ಅಂಶಗಳು ಉಲ್ಲೇಖವಾಗಿವೆ.ಮಾರ್ಚ್ 24ರಂದು ಕಾಡುಗೋಡಿಯ ವಿಲ್ಲಾದಲ್ಲಿ ಬಾಲಕಿ ವೆನ್ನಿಲಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಆರಂಭದಲ್ಲಿ ಇದನ್ನು ಅಸಹಜ ಸಾವು ಎಂದು ಪೊಲೀಸರು ದಾಖಲಿಸಿಕೊಂಡಿದ್ದರು. ಆದರೆ, ಬಳಿಕ ವೆನ್ನಿಲಾ ತಾಯಿ ಪ್ರಿಯಾಂಕಾಳ ಪ್ರಿಯಕರ ಮೋಹನ್ ಬಾಲಕಿಯನ್ನು ಕೊಲೆ ಮಾಡಿದ್ದ ಎಂದು ತನಿಖೆ ಮೂಲಕ ತಿಳಿಯಿತು. ಪ್ರಿಯಾಂಕಾ ಶಾಪಿಂಗ್ ಹೋದ ವೇಳೆ ಕಾರಿನಲ್ಲಿದ್ದ ಬಾಲಕಿ ಐಸ್ಕ್ರೀಮ್ ಬೇಕೆಂದು ಹಠ ಮಾಡಿದ್ದಕ್ಕೆ ಸಿಟ್ಟಾಗಿ ಆಕೆಯ ಹೊಟ್ಟೆಗೆ ಒದ್ದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಮೋಹನ್ ವಿಚಾರಣೆ ವೇಳೆ ಮಗುವಿನ ಮೇಲೆ ಹಲ್ಲೆ ನಡೆಸಿದ ಬಗ್ಗೆ ತಪ್ಪೊಪ್ಪಿಗೆ ನೀಡಿದ್ದ. ಆತನ ಹೇಳಿಕೆ ಆಧಾರದ ಮೇಲೆ ಈಗ ಆರೋಪಿ ಪ್ರಿಯಾಂಕಾಳನ್ನು ಸಹ ಬಂಧಿಸಲಾಗಿದೆ.
Laxmi News 24×7