ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈಅವರು, ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಹೊಸ ಪ್ರಾದೇಶಿಕ ರಾಜಕೀಯ ಪಕ್ಷದ ಸ್ಥಾಪನೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಬಿಜೆಪಿ ತೊರೆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ಗೆ ಬಂದ ಅವರು, ತಮ್ಮ ಮುಂಬರುವ ರಾಜಕೀಯ ನಡೆ ಹಾಗೂ ಹೊಸ ಆಂದೋಲನದ ನೀಲನಕ್ಷೆಯನ್ನು ಹಂಚಿಕೊಂಡಿದ್ದಾರೆ. ತಮ್ಮ ಹೊಸ ರಾಜಕೀಯ ಆಂದೋಲನಕ್ಕೆ ನಾವು ಜನರು ಎಂದು ಹೆಸರಿಡಲಾಗುವುದು ಎಂದು ಪ್ರಕಟಿಸಿದ ಅವರು, ಈ ವೇದಿಕೆಯು ಸಂಪೂರ್ಣವಾಗಿ ನಾಗರಿಕರ ಕೇಂದ್ರಿತವಾಗಿರಲಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕಳೆದ 18 ತಿಂಗಳುಗಳಿಂದ ಹಲವು ವೈಚಾರಿಕ ಮತ್ತು ಕಾರ್ಯವೈಖರಿಯ ವಿಚಾರಗಳಲ್ಲಿ ನನಗೆ ಬಿಜೆಪಿ ನಾಯಕತ್ವದ ಜೊತೆಗೆ ಭಿನ್ನಾಭಿಪ್ರಾಯಗಳಿದ್ದವು. ನಾನು 2025ರ ಡಿಸೆಂಬರ್ನಲ್ಲೇ ಪಕ್ಷ ಬಿಡುವ ಇಚ್ಛೆಯನ್ನು ಹೈಕಮಾಂಡ್ಗೆ ತಿಳಿಸಿದ್ದೆ. ಆದರೆ ಚುನಾವಣೆ ಮುಗಿಯುವವರೆಗೆ ಜವಾಬ್ದಾರಿ ನಿಭಾಯಿಸುವಂತೆ ಅವರು ಕೋರಿದ್ದರಿಂದ ನಾನು ಮುಂದುವರಿದಿದ್ದೆ,” ಎಂದು ಬಹಿರಂಗಪಡಿಸಿದರು.
ತಮ್ಮ ಮಾತಿನಲ್ಲಿ ಕರ್ನಾಟಕದಲ್ಲಿ ತಾವು ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ದಿನಗಳನ್ನು ಅಣ್ಣಾಮಲೈ ಭಾವನಾತ್ಮಕವಾಗಿ ಸ್ಮರಿಸಿಕೊಂಡರು. “ಯಾವ ಕುರ್ಚಿಯೂ, ಅಧಿಕಾರವೂ ಯಾರಿಗೂ ಶಾಶ್ವತವಲ್ಲ” ಎಂಬ ತತ್ವವನ್ನು ತಾವು ಪೊಲೀಸ್ ಸೇವೆಯಲ್ಲಿದ್ದಾಗಿನಿಂದಲೂ ನಂಬಿಕೊಂಡು ಬಂದಿರುವುದಾಗಿ ಅವರು ಮಾರ್ಮಿಕವಾಗಿ ಹೇಳಿದರು.
Laxmi News 24×7