ರಾಯಚೂರು: ಕಲಿಯುಗ ಕಾಮಧೇನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ 22 ದಿನದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದ್ದು, 4.35 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.
ಶಾಲಾ-ಕಾಲೇಜುಗಳಿಗೆ ರಜೆಯಿದ್ದ ಹಿನ್ನೆಲೆ ಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಭಕ್ತರು ದಂಡು ಹರಿದು ಬಂದಿದ್ದು, 22 ದಿನಗಳಲ್ಲೇ ಕೋಟ್ಯಂತರ ರೂ. ಕಾಣಿಕೆ ಸಂಗ್ರಹವಾಗಿದೆ. ಒಟ್ಟು 4,25,25,136 ರೂ. ಕಾಣಿಕೆ ಸಂಗ್ರಹವಾಗಿದ್ದು, ಇದರಲ್ಲಿ 4,19,97,861 ರೂ. ಕರೆನ್ಸಿ ನೋಟುಗಳು ಹಾಗೂ 15,27,275 ರೂ. ನಾಣ್ಯಗಳು ಸಂಗ್ರಹವಾಗಿವೆ. ಜೊತೆಗೆ 46 ಗ್ರಾಂ ಚಿನ್ನ, 750 ಗ್ರಾಂ ಬೆಳ್ಳಿಯನ್ನ ಕಾಣಿಕೆ ರೂಪದಲ್ಲಿ ಭಕ್ತರು ನೀಡಿದ್ದಾರೆ.
ಮಂತ್ರಾಲಯ ರಾಯರ ಮಠದಲ್ಲಿ ನಡೆಸಲಾದ ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಕರ ಸೇವಕರು ಭಾಗವಹಿಸಿದ್ದರು. ಕರ್ನೂಲು ಜಿಲ್ಲೆಯ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತ ಸುಧಾಕರ ರೆಡ್ಡಿ, ಶ್ರೀಮಠದ ಅಧಿಕಾರಿಗಳು ಹುಂಡಿ ಎಣಿಕೆ ವೇಳೆ ಹಾಜರಿದ್ದರು.
Laxmi News 24×7