ಹುಕ್ಕೇರಿ: ಐದು ದಶಕಗಳಿಂದ ಕತ್ತಿ ಮನೆತನಕ್ಕೆ ಹುಕ್ಕೇರಿ ತಾಲೂಕಿನ ಜನರು ಆಶೀರ್ವದಿಸಿ ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಿದ್ದಾರೆ. ಅವರ ಸಮಸ್ಯೆಗೆ ಸ್ಪಂದಿಸುವುದೇ ನಮ್ಮ ಆದ್ಯತೆ. ತಾಲೂಕಿನ ಸಮಗ್ರ ನೀರಾವರಿ ಹೋರಾಟಕ್ಕೆ ನಾನು ಬೆಂಬಲಿಸುತ್ತೇನೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಹುಕ್ಕೇರಿ ತಾಲೂಕು ಸಮಗ್ರ ನೀರಾವರಿಗೆ ಒತ್ತಾಯಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಗುರುವಾರ ಪಾಲ್ಗೊಂಡು ಮಾತನಾಡಿದ ಅವರು,
ತಾಲೂಕಿನ ಕಣಗಲಾ ಮತ್ತು ಅಮ್ಮಣಗಿ ಭಾಗದಲ್ಲಿ ನೀರಾವರಿ ಕಾರ್ಯ ಕೈಗೊಳ್ಳಬೇಕಿದೆ. ಆ ಸಮಸ್ಯೆ ಪರಿಹರಿಸಲು ಮಲ್ಲಿಕಾರ್ಜುನ ಏತ ನೀರಾವರಿ ಯೋಜನಾ ವರದಿ ತಯಾರಿಸಿ ತಂದೆ, ಸಚಿವರಾಗಿದ್ದ ದಿ.ಉಮೇಶ ಕತ್ತಿ 2019ರಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಸರ್ಕಾರ ತಾಂತ್ರಿಕ ನೆಪ ಹೇಳಿ ಎರಡು ಬಾರಿ ವರದಿ ಮರಳಿಸಿದೆ. ನ್ಯೂನತೆ ಸರಿಪಡಿಸಿ ಮತ್ತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ಬಾರಿ ಮಂಜೂರಾತಿ ಪಡೆಯುವುದೇ ನನ್ನ ಗುರಿಯಾಗಿದೆ ಎಂದರು.
ಶಿಪ್ಪುರ ರಾಮಲಿಂಗೇಶ್ವರ ಏತ ನೀರಾವರಿ ಯೋಜನೆ ವರದಿ ಸಿದ್ಧಪಡಿಸುತ್ತಿದ್ದು, ಅದನ್ನು ಸರ್ಕಾರಕ್ಕೆ ಶೀಘ್ರ ಸಲ್ಲಿಸಿ ಮಂಜೂರಾತಿ ಪಡೆಯಲಾಗುವುದು ಎಂದರು.
ರಾಜ್ಯ ರೈತ ಸಂಘ ಹಸಿರು ಸೇನೆ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಮತ್ತು ಅಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿ,
ರೈತರ ಸಮಸ್ಯೆಗೆ ಸ್ಪಂದಿಸಿದ ಶಾಸಕ ನಿಖಿಲ ಕತ್ತಿ ಕಾರ್ಯ ರೈತರ ಮನ ಗೆದ್ದಿದೆ. ಆದರೆ, ಹುಕ್ಕೇರಿ ತಾಲೂಕು ಸಂಪೂರ್ಣ ನೀರಾವರಿಗೊಳಿಸಬೇಕು. ಆಗ ಮಾತ್ರ ಜನರ ಋಣ ತೀರಿಸಿದಂತಾಗುತ್ತದೆ. ಇದೇ ತಾಲೂಕಿನ ಯಮಕನಮರಡಿ ಕ್ಷೇತ್ರ ಪ್ರತಿನಿಧಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪ್ರತಿಭಟನಾ ರೈತರ ಸಮಸ್ಯೆ ಕೇಳಲು ಬರದಿರುವುದು ಬೇಸರ ತರಿಸಿದೆ. ಮೇ 22ರಂದು ಹುಕ್ಕೇರಿ ಬಂದ್ ಮಾಡುವುದಾಗಿ ಕರೆ ನೀಡಿದರು.
ರೈತ ಮುಖಂಡ ಸುಭಾಸ ನಾಯಿಕ ಮಾತನಾಡಿ, ಹುಕ್ಕೇರಿ ನೀರಾವರಿಗಾಗಿ ಹೋರಾಟ ನಡೆಸಿದ್ದ ಹಲವು ರೈತ ಮುಖಂಡರನ್ನು ಪ್ರತಿಭಟನೆಗೆ ಆಹ್ವಾನಿಸದ ರೈತ ಸಂಘದ ಸ್ಥಳೀಯ ಮುಖಂಡರ ನಡೆ ಮನಸ್ಸಿಗೆ ನೋವು ತಂದಿದೆ ಎಂದರು.
ನಿಡಸೋಸಿ ಜಗದ್ಗುರು ಡಾ.ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ವಿರಕ್ತಮಠದ ಶಿವಬಸವ ಸ್ವಾಮೀಜಿ, ಹುಣಶೀಕೊಳ್ಳಮಠದ ಸಿದ್ಧಬಸವ ಸ್ವಾಮೀಜಿ, ಮುಖಂಡರಾದ ಸತ್ಯಪ್ಪ ನಾಯಿಕ, ಕಲಗೌಡ ಪಾಟೀಲ, ಮಾರುತಿ ಅಷ್ಟಗಿ, ಪ್ರಜ್ವಲ ನಿಲಜಗಿ, ಎ.ಕೆ.ಪಾಟೀಲ, ಉದಯ ಹುಕ್ಕೇರಿ, ಶೀತಲ ಬ್ಯಾಳಿ, ರಾಜು ಮುನ್ನೋಳಿ, ಸಂಜು ಹಾವಣ್ಣವರ, ಜಗದೀಶ ದೇವರಡ್ಡಿ, ರಾಜು ಪವಾರ, ಸತ್ಯಪ್ಪ ಮಲ್ಲಾಪುರ, ವಿಶ್ವನಾಥ ನಾಯಿಕ, ನಾಗರಾಜ ಹಾದಿಮನಿ, ಪ್ರೇಮ ಚೌಗಲಾ, ಭೀಮಗೌಡ ಗಿರಿಗೌಡನವರ ಇತರರಿದ್ದರು.