ಮಡಿಕೇರಿ: ಫಸಲು ಬರುವ ಸಮಯದಲ್ಲಿ ಸುಮಾರು 2000ಕ್ಕೂ ಅಧಿಕ ಕಾಫಿಗಿಡ ಮತ್ತು 250ಕ್ಕೂ ಹೆಚ್ಚು ಕಾಳುಮೆಣಸು ಬಳ್ಳಿಗಳನ್ನು ದುಷ್ಕರ್ಮಿಗಳು ಕಡಿದು ಹಾಕಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಸಮೀಪದ ಕಳಕೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಗೌತಮ್ ಅವರಿಗೆ ಸೇರಿದ ಸುಮಾರು 3.5 ಎಕರೆ ಜಾಗದಲ್ಲಿ ಏಳೆಂಟು ವರ್ಷದ ಕಾಫಿ ಗಿಡಗಳು ಹಾಗೂ ಕಾಳುಮೆಣಸು ಬಳ್ಳಿಗಳನ್ನು ದುಷ್ಕರ್ಮಿಗಳು ನಾಶ ಮಾಡಿದ್ದಾರೆ.
ತೋಟದಲ್ಲಿ ಅಳವಡಿಸಿದ್ದ ಎರಡು ಸಿಸಿ ಕ್ಯಾಮೆರಾಗಳನ್ನು ಕಿಡಿಗೇಡಿಗಳು ಕಿತ್ತೊಗೆದಿದ್ದಾರೆ. ಮಾಲೀಕರು ಮದುವೆಗೆಂದು ಮೈಸೂರಿಗೆ ಹೋಗಿದ್ದರು. ವಿಷಯ ತಿಳಿದು ದುಷ್ಕರ್ಮಿಗಳು ಕಾಫಿ ಬೆಳೆ ನಾಶ ಮಾಡಿದ್ದಾರೆ.
ಈ ಸಂಬಂಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಡಿಕೇರಿಯಿಂದ ಶ್ವಾನ ದಳವನ್ನು ಸ್ಥಳಕ್ಕೆ ಕರೆತಂದು ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಮುಂದಾಗಿದ್ದಾರೆ.
ಈ ರೀತಿಯ ಘಟನೆಯಿಂದ ಸುತ್ತಮುತ್ತಲಿನ ಕಾಫಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಈ ರೀತಿಯ ಕೃತ್ಯ ಎಸಗಿದ ಕಿಡಿಗೇಡಿಗಳಿಗೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕು. ತೋಟದಲ್ಲಿ ಇರುವ ಕಾಫಿ ಗಿಡ ಹಾಗೂ ಕರಿಮೆಣಸು ಗಿಡಗಳನ್ನು ತಮ್ಮ ಮಕ್ಕಳ ಹಾಗೆ ಆರೈಕೆ ಮಾಡುತ್ತೇವೆ. ತೋಟವನ್ನು ಈ ರೀತಿಯಲ್ಲಿ ಹಾನಿ ಮಾಡಿರುವುದು ಸರಿಯಲ್ಲ. ಆದಷ್ಟು ಬೇಗ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Laxmi News 24×7