ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗಾಗಿ ಕೇಂದ್ರ ವೀಕ್ಷಕರಾಗಿ ಗೃಹಸಚಿವ ಅಮಿತ್ ಶಾ ಅವರಿಂದು ಕೋಲ್ಕತ್ತಾಗೆ ಆಗಮಿಸಿದ್ದಾರೆ. ನೂತನ ಸಿಎಂ ಆಯ್ಕೆ ಹಿನ್ನೆಲೆ ನಡೆಯಲಿರುವ ಪಕ್ಷದ ಸಭೆಗೂ ಮುನ್ನ ಇಲ್ಲಿನ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದಕ್ಕ ಮುನ್ನ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಸಿಎಂ ರೇಸ್ನಲ್ಲಿರುವ ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಅಮಿತ್ ಶಾ ಅವರನ್ನ ಸ್ವಾಗತಿಸಿದರು. ಬಳಿಕ ವಿಮಾನ ನಿಲ್ದಾಣದ ಹೊರಗೆ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಬಂಗಾಳ ಜನರನ್ನುದ್ದೇಶಿಸಿ ಶಾ ಮಾತನಾಡಿದರು
ಬಿಜೆಪಿಗೆ ನೀಡಿರುವ ಅಪಾರ ಪ್ರೀತಿ, ವಿಶ್ವಾಸ ಮತ್ತು ಬೆಂಬಲಕ್ಕಾಗಿ ನಾನು ಇಡೀ ಬಂಗಾಳಿ ಜನರಿಗೆ ಧನ್ಯವಾದ ಸಲ್ಲಿಸುತ್ತೇನೆ. ನಿಮ್ಮ ಆಕಾಂಕ್ಷೆಗಳನ್ನು ಈಡೇರಿಸಲು ನಾವು ಸಂಕಲ್ಪ ಮಾಡಿದ್ದೇವೆ ಎಂದು ಶಾ ಭರವಸೆ ನೀಡಿದರು. ಬಳಿಕ ಅಲ್ಲಿಂದ ಶಾಸಕಾಂಗ ಪಕ್ಷದ ಸಭೆಗಾಗಿ ತೆರಳಿದರು.
ಈ ಮಧ್ಯೆ ಬಿಜೆಪಿ ಸಂಸದ ರಾಹುಲ್ ಸಿನ್ಹಾ ಮಾತನಾಡಿ, ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಮೇ 4 ರ ನಂತರ ಅಮಿತ್ ಶಾ ಅವರಾಗಲಿ, ಯಾವುದೇ ಕೇಂದ್ರ ಸಚಿವರಾಗಲಿ ರಾಜ್ಯಕ್ಕೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ ಅಂತ ಹೇಳುತ್ತಿದ್ದವರಿಗೆ, ಅದು ತಪ್ಪು ಅನ್ನೋದು ಈಗ ಅರಿವಾಗಿದೆ. ಮೇ 4 ರ ನಂತರ ಅಮಿತ್ ಶಾ ಬರೋದಿಲ್ಲ ಎನ್ನುತ್ತಿದ್ದ ದುರಂಹಾರಿ ಜನರೇ … ಇಂದು ಬಂದಿದ್ದಾರೆ ನೋಡಿ.. ಎನ್ನುತ್ತಲೇ ಮಾತಿನ ಚಾಟಿ ಬೀಸಿದರು.
ಮುಂದುವರಿದು, ಮುಖ್ಯಮಂತ್ರಿ ಅಭ್ಯರ್ಥಿಯನ್ನ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೆಸರಿಸಲಾಗುತ್ತದೆ. ಇಂದು ಸಂಜೆ 6 ಗಂಟೆಯೊಳಗೆ ಎಲ್ಲವೂ ಸ್ಪಷ್ಟವಾಗುತ್ತೆ ಎಂದು ತಿಳಿಸಿದರು.
Laxmi News 24×7