ಧಾರವಾಡ: ಪಟ್ಟಣದ ಗದಗ-ಚಿಲಕವಾಡ ಕ್ರಾಸ್ ಬಳಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 300ಕ್ಕೂ ಅಧಿಕ ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಗದಗದಿಂದ ಅಣ್ಣಿಗೇರಿ ಮಾರ್ಗವಾಗಿ ಅಕ್ಕಿ ಸಾಗಿಸುವ ವೇಳೆ ಲಾರಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದೆ. ಯಾವುದೇ ಪರವಾನಗಿ ಹಾಗೂ ದಾಖಲಾತಿ ಇಲ್ಲದೆ ಅಕ್ರಮವಾಗಿ ಲಾರಿಯಲ್ಲಿ 300ಕ್ಕೂ ಅಧಿಕ ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯನ್ನು 624 ಪ್ಲಾಸ್ಟಿಕ್ ಚೀಲಗಳಲ್ಲಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ, ಲಾರಿ ಹಾಗೂ ಅಕ್ಕಿ ವಶಕ್ಕೆ ಪಡೆದಿದ್ದಾರೆ. ಲಾರಿಯಲ್ಲಿದ್ದ ಅಕ್ಕಿ ಸುಮಾರು 10.83 ಲಕ್ಷ ರೂಪಾಯಿ ಮೌಲ್ಯ ಹೊಂದಿದೆ ಎನ್ನಲಾಗಿದೆ. ಲಾರಿ ಚಾಲಕನ ವಿರುದ್ಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿಯು ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಗಣೇಶಪೂರ ಗ್ರಾಮದ ಪವನ ಚಿಂತಾಮನ ನಂದನವಾರಗೆ ಸೇರಿದ್ದು ಎನ್ನಲಾಗಿದೆ. ಉಪ ತಹಸೀಲ್ದಾರ ರಾಜು ದೊಡಮನಿ, ಆಹಾರ ನಿರೀಕ್ಷಕ ತಮ್ಮಣ್ಣ ಮುತ್ತಣ್ಣವರ, ಎಎಸ್ಐ ವಿ.ಆರ್. ಮುಕ್ಕಣ್ಣವರ, ಗ್ರಾಮ ಆಡಳಿತಾಧಿಕಾರಿ ಮುತ್ತಣ್ಣ ಚಿಕ್ಕನರಗುಂದ ಕಾರ್ಯಾಚರಣೆಯಲ್ಲಿದ್ದರು.
Laxmi News 24×7