ದಾವಣಗೆರೆ: ಜಿಲ್ಲೆಯ ಹರಿಹರ ಪಂಚಮಸಾಲಿ ಪೀಠದ ವಿವಾದ ಅತ್ಯಂತ ಕ್ಲಿಷ್ಟಕರ ಹಂತಕ್ಕೆ ತಲುಪಿದೆ. ಉಚ್ಚಾಟಿತ ವಚನಾನಂದ ಸ್ವಾಮೀಜಿ ವಿರುದ್ಧ ಕೇಳಿ ಬಂದಿರುವ ವಿಕೃತ ಆರೋಪದ ಸತ್ಯಾಸತ್ಯತೆ ಬಯಲಾಗಲಿದೆ. ಮಠದ ಮೂವರು ಮಕ್ಕಳು ನೀಡಿದ್ದ ದೂರಿನ ಅನ್ವಯ ನಡೆದಿದ್ದ ಕೌನ್ಸಿಲಿಂಗ್ ವರದಿ ಇನ್ನೇನು ಸಿಡಬ್ಲ್ಯೂಸಿ ಕೈಸೇರಲಿದೆ. ಮಕ್ಕಳ ಹೇಳಿಕೆಯಲ್ಲಿ ಏನಿದೆ? ಶ್ರೀಗಳ ಮೇಲೆ ಪೋಕ್ಸೋ ಕೇಸ್ ದಾಖಲಾಗುತ್ತಾ ಎಂಬುದು ಇಂದು ನಿರ್ಧಾರವಾಗಲಿದೆ.
ಹರಿಹರ ಪಂಚಮಸಾಲಿ ಪೀಠದ ಆವರಣದಲ್ಲಿ ಮೌನ ಆವರಿಸಿದೆ. ಅನಾಥ ಮಕ್ಕಳನ್ನು ವಚನಾನಂದ ಶ್ರೀಗಳು ಮಸಾಜ್ಗೆ ಬಳಸಿಕೊಳ್ಳುತ್ತಿದ್ದರು ಎಂಬ ಆರೋಪಕ್ಕೆ ಟ್ವಿಸ್ಟ್ ಸಿಕ್ಕಿದೆ. ಟ್ರಸ್ಟಿಗಳ ಆರೋಪಕ್ಕೆ ಕಾನೂನು ಬಲ ಸಿಗುವ ಲಕ್ಷಣಗಳು ಕಾಣುತ್ತಿವೆ. ಮಠದ ಹಾಸ್ಟೆಲ್ನಲ್ಲಿದ್ದ ಮೂವರು ಮಕ್ಕಳು ಶ್ರೀಗಳ ವಿರುದ್ಧ ಮಕ್ಕಳ ರಕ್ಷಣಾ ಸಮಿತಿಗೆ ದೂರು ನೀಡಿದ್ದಾಗಿದೆ. ಈ ದೂರಿನ ಅನ್ವಯ ಈಗಾಗಲೇ ಮಕ್ಕಳ ಕೌನ್ಸಿಲಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮಕ್ಕಳ ರಕ್ಷಣಾ ಸಮಿತಿಯ ಸದಸ್ಯರು ಮತ್ತು ಅಧ್ಯಕ್ಷರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮಕ್ಕಳನ್ನು ಒಬ್ಬೊಬ್ಬರಾಗಿ ವಿಚಾರಣೆ ನಡೆಸಲಾಗಿದ್ದು, ಅವರ ಹೇಳಿಕೆಗಳನ್ನು ಇಂದು ಅಧಿಕೃತವಾಗಿ ವರದಿ ರೂಪದಲ್ಲಿ ಸಿದ್ಧಪಡಿಸಲಾಗುತ್ತದೆ. ಒಂದು ವೇಳೆ ಮಕ್ಕಳು ತಮ್ಮ ಹೇಳಿಕೆಯಲ್ಲಿ ಸ್ವಾಮೀಜಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಅಥವಾ ಮಸಾಜ್ಗೆ ಬಲವಂತಪಡಿಸಿದ್ದಾರೆ ಎಂದು ಹೇಳಿದ್ದರೆ ಶ್ರೀಗಳಿಗೆ ಜೈಲು ಶಿಕ್ಷೆ ಖಚಿತವಾಗಲಿದೆ.
ಈಗಾಗಲೇ ಮಠದ ಸಿಬ್ಬಂದಿ ಮತ್ತು ಮುಖಂಡರ ವಿಚಾರಣೆ ನಡೆಸಿರುವ ಸಿಡಬ್ಲ್ಯೂಸಿ, ಇಂದು ಮಕ್ಕಳ ಹೇಳಿಕೆಯನ್ನು ಪರಿಶೀಲಿಸಲಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈ ವರದಿಯನ್ನು ಅತ್ಯಂತ ಗೌಪ್ಯವಾಗಿ ಇಡಲಾಗಿದೆ. ಇಂದಿನ ನಿರ್ಧಾರದ ಮೇಲೆ ಶ್ರೀಗಳು ಮಠದಲ್ಲಿ ಇರುತ್ತಾರೋ ಅಥವಾ ಕಂಬಿ ಎಣಿಸುತ್ತಾರೋ ಎನ್ನುವುದು ನಿರ್ಧಾರವಾಗಲಿದೆ. ಅಲ್ಲದೆ ಮಕ್ಕಳು ಏನಾದರೂ ದೂರಿನಲ್ಲಿ ಉಲ್ಲೇಖ ಮಾಡಿದಂತೆ ಸರಿಯಾಗಿ ಊಟ ನೀಡುತ್ತಿರಲಿಲ್ಲ. ಸ್ವಾಮೀಜಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು, ದೈಹಿಕವಾಗಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಉಲ್ಲೇಖಿಸಿದ್ರೆ ವಚನಾನಂದ ಶ್ರೀಗೆ ಕಂಟಕ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಟ್ರಸ್ಟಿಗಳು ಮಕ್ಕಳ ಪರವಾಗಿ ನಿಂತಿದ್ದು, ಶ್ರೀಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಈ ವರದಿ ಬಂದ ಕೂಡಲೇ ಮುಂದಿನ ಕಾನೂನು ಸಮರಕ್ಕೆ ಎರಡೂ ಕಡೆಯವರು ಸಜ್ಜಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಹರಿಹರ ಪಂಚಮಸಾಲಿ ಮಠದಲ್ಲಿ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದೆ.
Laxmi News 24×7