ಮೈಸೂರು: ಕೊರೊನಾ ತಡೆಗಾಗಿ ಮೈಸೂರಿನಲ್ಲಿ ಲಾಕ್ಡೌನ್ ಮಾಡಲ್ಲ. ಬದಲಾಗಿ ಮುಂಬೈನ ಧಾರಾವಿ ಸ್ಲಂ ಮಾಡೆಲ್ ಜಾರಿಗೆ ತರಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದ್ದಾರೆ.
ಇಡೀ ಮೈಸೂರು ಲಾಕ್ ಆಗಲ್ಲ. ಬದಲಾಗಿ ಸೋಂಕು ಹೆಚ್ಚಿರುವ ಎನ್.ಆರ್. ಕ್ಷೇತ್ರದ ಕೆಲವು ಭಾಗಗಳು ಲಾಕ್ಡೌನ್ ಆಗಲಿವೆ. ಲಾಕ್ಡೌನ್ ಮಾಡೋದರಿಂದ ಕೊರೊನಾ ಪ್ರಕರಣಗಳು ಕಡಿಮೆ ಆಗಲ್ಲ. ಕೊರೊನಾದಿಂದ ಆಗುತ್ತಿರುವ ಸಾವುಗಳ ಸಂಖ್ಯೆ ಕಡಿಮೆ ಮಾಡೋದು ನಮ್ಮ ಉದ್ದೇಶ. ಲಾಕ್ಡೌನ್ ಮಾಡಿ ಹಾಟ್ಸ್ಪಾಟ್ ಗಳ ಸರ್ವೇ ಮಾಡಿ ಮಾಹಿತಿ ಪಡೆದುಕೊಳ್ಳುತ್ತೇವೆ. ಸರ್ವೇ ಸಂದರ್ಭ ಆಂಟಿಜೆನ್ ಟೆಸ್ಟ್ ಮಾಡಿ ಸ್ಥಳದಲ್ಲೆ ರಿಸಲ್ಟ್ ಪಡೆಯುತ್ತೇವೆ. ಮುಂಬೈನ ಧಾರಾವಿ ಮಾಡೆಲ್ನಲ್ಲಿ ಚೇಜಿಂಗ್ ವೈರಸ್ ಮಾಡೆಲ್ ಪ್ರಯತ್ನ ಮಾಡುತ್ತೇವೆ. ಆ ಮೂಲಕ ನಿಗದಿತ ಕಂಟೈನ್ಮೆಂಟ್ ಝೋನ್ನಲ್ಲಿ ಸೋಂಕು ನಿಯಂತ್ರಣಕ್ಕೆ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಕೋವಿಡ್ ಸಾವಿನ ಹೆಚ್ಚಳ ವಿಚಾರವಾಗಿ ಮಾತನಾಡಿದ ಜಿಲ್ಲಾಧಿಕಾರಿಗಳು, ಅಧ್ಯಯನಕ್ಕಾಗಿ ಬೆಂಗಳೂರಿನಿಂದ ತಜ್ಞರ ತಂಡ ಆಗಮಿಸಿದ್ದು, ದೇಶಕ್ಕೆ ಹೋಲಿಸಿದರೆ ಮೈಸೂರಿನಲ್ಲಿ ಅತೀ ಸಾವು ಸಂಭವಿಸಿದೆ. ದೇಶದಲ್ಲಿ ಕೋವಿಡ್ ಸಾವಿನ ಶೇಕಡವಾರು ಪ್ರಮಾಣ 1.5 ರಷ್ಟಿದೆ. ಆದ್ರೆ ಮೈಸೂರಲ್ಲಿ ಇದುವರೆಗೆ 28 ಮಂದಿ ಸಾವನಪ್ಪಿದ್ದಾರೆ. ಅದರಲ್ಲೂ ಕೆ.ಆರ್.ಆಸ್ಪತ್ರೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಐಎಲ್ಐ ಮತ್ತು ಸಾರಿ ಪ್ರಕರಣಗಳು ಕೆ.ಆರ್.ಆಸ್ಪತ್ರೆಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ಬಗ್ಗೆ ಅಧ್ಯಯನ ನಡೆಸಲು ಬೆಂಗಳೂರಿನ ವೈದ್ಯರು ಮತ್ತು ತಜ್ಞರ ತಂಡ ಮೈಸೂರಿಗೆ ಆಗಮಿಸಿದೆ. ತಜ್ಞರ ವರದಿ ಆಧರಿಸಿ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಧಾರಾವಿ ಮಾಡೆಲ್ ಪ್ರಯೋಗ: ಜನರು ನಮ್ಮ ಬಳಿ ಟೆಸ್ಟ್ ಮಾಡಿಸೋದು ಬೇಡ, ನಾವೇ ಜನರ ಬಳಿ ಹೋಗಿ ಟೆಸ್ಟ್ ಮಾಡೋಣ. ಈ ಪ್ರಯೋಗವನ್ನ ಎನ್. ಆರ್.ಕ್ಷೇತ್ರದ ಆಯ್ದ ಕಂಟೈನ್ಮೆಂಟ್ ಜೋನ್ನಲ್ಲಿ ಮಾಡಲಾಗುತ್ತದೆ. ಇದರಿಂದ ಜನರು ಇದ್ದಲ್ಲಿಯೇ ಸೋಂಕು ಪತ್ತೆಗೆ ಅವಕಾಶ ಆಗಲಿದೆ. 100 ಮನೆಗಳಿಗೂ ಹೆಚ್ಚಿನ ಪ್ರದೇಶವನ್ನ ಇದಕ್ಕಾಗಿ ಆಯ್ಕೆ ಮಾಡುತ್ತೇವೆ. ಆ ಮೂಲಕ ಧಾರಾವಿಯಲ್ಲಿ ಸೋಂಕು ನಿಯಂತ್ರಣ ಮಾಡಿದಂತೆ ಇಲ್ಲಿಯೂ ಮಾಡುವ ಚಿಂತನೆ ಮಾಡ್ತೇವೆ. ಇನ್ನೆರಡು ದಿನದಲ್ಲಿ ಸರ್ವೇ ಆರಂಭಿಸಿ ವಾರದೊಳಗೆ ಪ್ರಕ್ರಿಯೆ ಮುಗಿಸುತ್ತೇವೆ ಎಂದರು.
ನಾಳೆಯಿಂದ ಕೋವಿಡ್ ಕೇರ್ ಸೆಂಟರ್ ನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ. ಇನ್ನು 1000 ಬೆಡ್ಗಾಗಿ ಚಾಮುಂಡಿ ವಿಹಾರ್ ಸ್ಟೇಡಿಯಂ ಆಯ್ಕೆ ಮಾಡಿಕೊಳ್ಳಲಾಗಿದೆ. ಮೈಸೂರಿನಲ್ಲಿ ಸದ್ಯಕ್ಕೆ 3500 ಸಾವಿರ ಮಂದಿಗೆ ಚಿಕಿತ್ಸೆ ನೀಡಬಹುದು. ಮೈಸೂರಿನಲ್ಲಿ ಸದ್ಯಕ್ಕೆ 3,500 ಸಾವಿರ ಮಂದಿಗೆ ಚಿಕಿತ್ಸೆ ನೀಡಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.