ಬೆಂಗಳೂರು : ರಾಜ್ಯದಲ್ಲಿ ವಾರ್ಷಿಕ ವಿದ್ಯುತ್ ಉತ್ಪಾದನೆಯು ಶೇ.5ರಷ್ಟು ಹೆಚ್ಚಳವಾಗಿದ್ದು, ಈ ಬಾರಿ ಬೇಸಿಗೆಯಲ್ಲಿ ವಿದ್ಯುತ್ಗೆ ಬರವಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 1,100 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿದ್ದು, ಹೊರ ರಾಜ್ಯಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಮಾರಾಟ ಮಾಡಲಾಗುತ್ತಿದೆ.
2024ರಲ್ಲಿ ತೀವ್ರ ವಿದ್ಯುತ್ ಕ್ಷಾಮ ಎದುರಿಸಿದ್ದ ರಾಜ್ಯದಲ್ಲಿ ಈಗ ವಿದ್ಯುತ್ಗೆ ಕೊರತೆಯಿಲ್ಲ. ಸಾಂಪ್ರದಾಯಿಕ ಹಾಗೂ ನವೀಕೃತ ಇಂಧನ ಮೂಲಗಳಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯು ಗಣನೀಯವಾಗಿ ಏರಿಕೆಯಾಗಿದ್ದು, ಇಂಧನ ಇಲಾಖೆಯು ವಿದ್ಯುತ್ ವಲಯದಲ್ಲಿ ಸ್ವಾವಲಂಬನೆ ಸಾಧಿಸುವತ್ತ ಮುಖ ಮಾಡಿದೆ.
ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದಲೂ ವಿದ್ಯುತ್ ಉತ್ಪಾದನೆ ಏರು ಗತಿಯಲ್ಲೇ ಸಾಗಿದೆ. 2024-25ರಲ್ಲಿ(ಜನವರಿ ಅಂತ್ಯದವರೆಗೆ) 29,634 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗಿತ್ತು. 2025-26ರಲ್ಲಿ (ಜನವರಿ ಅಂತ್ಯಕ್ಕೆ) 30,733 ಮೆ.ವ್ಯಾ. ಉತ್ಪಾದನೆಯಾಗಿದೆ. ಕೃಷಿ ಭೂಮಿ ವಿಸ್ತರಣೆ, ವಾಣಿಜ್ಯ ಮತ್ತು ವಸತಿ ಸ್ಥಳಗಳ ಹೆಚ್ಚಳ, ಹವಾ ನಿಯಂತ್ರಕ ಸಾಧನಗಳು ಹಾಗೂ ಗೃಹೋಪಯೋಗಿ ಸಲಕರಣೆಗಳ ವ್ಯಾಪಕ ಬಳಕೆ, ಕೈಗಾರಿಕೀಕರಣದಿಂದ ವಿದ್ಯುತ್ಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಸದ್ಯ ದೈನಂದಿನ ವಿದ್ಯುತ್ ಬೇಡಿಕೆಯು 15,715 ಮೆ.ವ್ಯಾ. ಇದ್ದು, ಈ ಬೇಡಿಕೆಯನ್ನು ತಲುಪಲು ಪರ್ಯಾಯ ಶಕ್ತಿ ಮೂಲಗಳಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಹಿಂದಿನ ವರ್ಷ ಮುಂಗಾರು ಹಾಗೂ ಹಿಂಗಾರಿನಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ಮಳೆ ಯಾಗಿದ್ದು, ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದೆ. ಪರಿಣಾಮ ಜಲ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ನಿರಂತರವಾಗಿದೆ. 2024-25ರಲ್ಲಿ ಜನವರಿವರೆಗೆ ಜಲ ವಿದ್ಯುತ್ ಘಟಕಗಳಿಂದ 11,114 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾಗಿತ್ತು. 2025-26ರಲ್ಲಿ ಜನವರಿ ಅಂತ್ಯದವರೆಗೆ 13,059 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾಗಿದೆ.
ಪವನ ವಿದ್ಯುತ್ ವಲಯದಲ್ಲಿ ರಾಜ್ಯದ ಸಾಧನೆಯು ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೂ ಪ್ರಸ್ತುತವಾಗಿದೆ. ರಾಜ್ಯದ ಪವನ ವಿದ್ಯುತ್ ಸಾಮರ್ಥ್ಯವು ದಕ್ಷಿಣ ಆಫ್ರಿಕಾ, ಪೋರ್ಚುಗಲ್, ನ್ಯೂಜಿಲೆಂಡ್ನಂತಹ ದೇಶಗಳ ಒಟ್ಟು ಪವನ ವಿದ್ಯುತ್ ಸಾಮರ್ಥ್ಯಕ್ಕಿಂತಲೂ ಹೆಚ್ಚಾಗಿದೆ. ಸ್ವೀಡನ್ ಮತ್ತು ಆಸ್ಪ್ರೇಲಿಯಾದ ಪವನ ವಿದ್ಯುತ್ ಸಾಮರ್ಥ್ಯಕ್ಕೆ ಹತ್ತಿರವಾಗಿದೆ. ಕಳೆದ ವರ್ಷ ದಾಖಲೆ ಪ್ರಮಾಣದಲ್ಲಿ ಪ್ರತಿನಿತ್ಯ ಸರಾಸರಿ 50 ದಶಲಕ್ಷ ಯೂನಿಟ್ಗೂ ಹೆಚ್ಚು ಪವನ ವಿದ್ಯುತ್ ಉತ್ಪಾದನೆಯಾಗಿದೆ. ಪ್ರಸ್ತುತ 55.15 ದಶಲಕ್ಷ ಯೂನಿಟ್ ಪವನ ವಿದ್ಯುತ್ ಉತ್ಪಾದನೆಯಾಗುತ್ತಿದೆ.
2025ರ ಡಿಸೆಂಬರ್ನಲ್ಲಿ ದೈನಂದಿನ ವಿದ್ಯುತ್ ಬೇಡಿಕೆಯು 17,220 ಮೆ.ವ್ಯಾ. ಇತ್ತು. ಈ ಬಾರಿ ಬೇಸಿಗೆಯಲ್ಲಿ ಕಳೆದ ವರ್ಷಕ್ಕಿಂತ ಶೇ.5ರಷ್ಟು ಹೆಚ್ಚುವರಿ ವಿದ್ಯುತ್ ಬೇಡಿಕೆ ನಿರೀಕ್ಷಿಸಲಾಗಿದೆ. ಪ್ರಸ್ತುತ ರಾಜ್ಯದ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಜುಲೈ ಅಂತ್ಯದವರೆಗೆ ಪ್ರತಿನಿತ್ಯ 33 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಬಹುದು. ಹೀಗಾಗಿ, ಜುಲೈವರೆಗೂ ವಿದ್ಯುತ್ನ ಸಮಸ್ಯೆಯಿಲ್ಲ ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿಎಲ್) ಅಧಿಕಾರಿಗಳು ತಿಳಿಸಿದ್ದಾರೆ.+
ರಾಯಚೂರು, ಯರಮರಸ್ ಮತ್ತು ಬಳ್ಳಾರಿಯ ಉಷ್ಣ ವಿದ್ಯುತ್ ಸ್ಥಾವರಗಳ ಘಟಕಗಳನ್ನು ಬೇಸಿಗೆಯಲ್ಲಿ ಅಗತ್ಯ ವಿದ್ಯುತ್ ಉತ್ಪಾದಿಸಲು ಅನುವಾಗುವಂತೆ ಸಿದ್ಧಗೊಳಿಸಲಾಗುತ್ತಿದೆ. ಜತೆಗೆ, ನವೀಕರಿಸಬಹುದಾದ ಇಂಧನ ಮೂಲಗಳಿಂದಲೂ ಸಾಕಷ್ಟು ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಪಿಎಂ ಕುಸುಮ, ಕುಸುಮ್ ಬಿ ಮತ್ತು ಕುಸುಮ್ ಸಿ ಯೋಜನೆಗಳು ರೈತರಿಗೆ ವರವಾಗಿದ್ದು, ವಿದ್ಯುತ್ ಸಮಸ್ಯೆ ನೀಗಿಸುವುದರ ಜತೆಗೆ ಆರ್ಥಿಕ ಉಳಿತಾಯ ಮತ್ತು ಆದಾಯಕ್ಕೆ ದಾರಿಯಾಗಿವೆ.
Laxmi News 24×7