ನವದೆಹಲಿ: ಲೋಕಸಭೆಯಲ್ಲಿ ಸ್ಪೀಕರ್ ಪೀಠದ ಮೇಲೆ ಕಾಗದ ಹರಿದು ಎಸೆದ 8 ಮಂದಿ ಸಂಸದರನ್ನ ಇಡೀ ಬಜೆಟ್ ಅಧಿವೇಶನದಿಂದಲೇ ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡ ಸಂಸದರಲ್ಲಿ ಮಾಣಿಕ್ಕಂ ಟ್ಯಾಗೋರ್, ಗುರ್ಜೀತ್ ಸಿಂಗ್ ಔಜ್ಲಾ, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಕಿರಣ್ ಕುಮಾರ್ ರೆಡ್ಡಿ, ಎಸ್ ವೆಂಕಟೇಶನ್, ಹಿಬಿ ಈಡನ್, ಡೀನ್ ಕುರಿಯಾಕೋಸ್ ಮತ್ತು ಪ್ರಶಾಂತ್ ಪಡೋಲೆ ಸೇರಿದ್ದಾರೆ. ಈ ಪೈಕಿ 7 ಮಂದಿ ಕಾಂಗ್ರೆಸ್ನವರಾಗಿದ್ದು, ವೆಂಕಟೇಸನ್ ಸಿಪಿಎಂ ನವರಾಗಿದ್ದಾರೆ.
ಇಂದು ಮಧ್ಯಾಹ್ನ 3 ಗಂಟೆ ಹೊತ್ತಿಗೆ ಕಲಾಪ ಪುನಾರಂಭವಾದಾಗ ಸಭಾಪತಿಗಳು ಸ್ಪೀಕರ್ ಪೀಠದ ಮೇಲೆ ಕಾಗದ ಎಸೆದ ಸಂಸದರ ಹೆಸರುಗಳನ್ನ ಪ್ರಸ್ತಾಪಿಸಿದ್ರು. ನಂತರ ಅಧಿವೇಶನದ ಉಳಿದ ಅವಧಿಗೆ ಕಾಗದ ಎಸೆದ ಸಂಸದರನ್ನ ಅಮಾನತುಗೊಳಿಸುವ ಪ್ರಸ್ತಾವನೆಯನ್ನ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಂಡಿಸಿದರು. ಇದನ್ನ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಪ್ರಸ್ತಾವನೆ ಅಂಗೀಕಾರವಾದ ನಂತರವೂ ವಿಪಕ್ಷ ಸದಸ್ಯರು ಸಭಾಪತಿಯ ಮೇಲೆ ಕಾಗದಗಳನ್ನ ಎಸೆಯುತ್ತಲೇ ಇದ್ದರು.
ಈ ಬೆಳವಣಿಗೆ ನಂತರ ಸಂಸತ್ತಿನ ನಿಯಮಗಳನ್ನ ಉಲ್ಲಂಘಿಸಿದ್ದಕ್ಕಾಗಿ ನಿಯಮ 374 ರ ಅಡಿಯಲ್ಲಿ ಸ್ಪೀಕರ್ 8 ಜನ ಸಂಸದರನ್ನ ಇಡೀ ಬಜೆಟ್ ಅಧಿವೇಶನದಿಂದಲೇ ಅಮಾನತುಗೊಳಿಸಿದರು. ಸದನದಲ್ಲಿ ಕುಳಿತುಕೊಳ್ಳುವುದು, ಇತರ ಚರ್ಚೆಗಳಲ್ಲಿ ಭಾಗವಹಿಸುವುದನ್ನೂ ನಿಷೇಧಿಸಲಾಯಿತು.
ವಿಪಕ್ಷ ಸಂಸದರ ವಿರುದ್ಧ ಕ್ರಮ ಕೈಗೊಂಡ ಬಳಿಕ ಸಂಸತ್ನಲ್ಲಿ ಗದ್ದಲ-ಕೋಲಾಹಲ ಎದ್ದಿತು. ಸಭಾಧ್ಯಕ್ಷರ ನಡವಳಿಕೆಯನ್ನ ವಿಪಕ್ಷ ಸದಸ್ಯರು ಅಶಿಸ್ತು ಎಂದು ಕರೆದರು. ಅಲ್ಲದೇ ರಾಹುಲ್ ಗಾಂದಿ ಅವರ ಭಾಷಣಕ್ಕೆ ಬ್ರೇಕ್ ಹಾಕುವ ಜೊತೆಗೆ ಮುಂದಿ ಭಾಷಣಕಾರರ ಹೆಸರನ್ನು ಘೋಷಿಸಿದರು. ಸಮಾಜವಾದಿ ಪಕ್ಷ, ಟಿಎಂಸಿ ಮತ್ತು ಇತರ ವಿಪಕ್ಷ ಸಂಸದರು ಸಹ ಮಾತನಾಡಲೂ ನಿರಾಕರಿಸಿದರು. ಇದರಿಂದ ಸಿಟ್ಟಾದ ವಿಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು.
Laxmi News 24×7